ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಶೀಬಾರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವನದಲ್ಲಿ ಆಗಸ್ಟ್ 02 ಭಾನುವಾರ ಬೆಳಿಗ್ಗೆ 7.00 ಗಂಟೆಗೆ ಶ್ರಮದಾನ, ಶಿವಯೋಗ ಹಾಗೂ ಇತ್ತೀಚೆಗೆ ಅಗಲಿದ ಖ್ಯಾತ ಹಿನ್ನೆಲೆ ಗಾಯಕಿ ಡಾ. ಎಸ್. ಜಾನಕಿ ಮತ್ತು ಹಿರಿಯ ಗಾಂಧಿವಾದಿ ಹೆಚ್. ಹನುಮಂತಪ್ಪನವರಿಗೆ ‘ನುಡಿನಮನ’ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮವು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಡೆಯಲಿದೆ.
ದಿವ್ಯ ಸಾನ್ನಿಧ್ಯ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ವಿಶೇಷ ಉಪನ್ಯಾಸ: ಹಿರಿಯ ವಕೀಲರಾದ ಡಾ. ಪಾತ್ಯರಾಜನ್ ಅವರು ಹಿರಿಯ ಗಾಂಧಿವಾದಿ ಹೆಚ್. ಹನುಮಂತಪ್ಪನವರ ಕುರಿತು ಸ್ಮರಣ ನುಡಿಗಳನ್ನು ಆಡಲಿದ್ದಾರೆ.
ಗೀತ ಗಾಯನ: ಗಾನಕೋಕಿಲೆ ಡಾ. ಎಸ್. ಜಾನಕಿಯವರು ಹಾಡಿರುವ ಜನಪ್ರಿಯ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
ಈ ಸಮಾರಂಭದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.



