ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಇತಿಹಾಸ ಪ್ರಸಿದ್ಧ, ದೊಡ್ಡಬಳ್ಳಾಪುರ ನಗರದೇವತೆಯದ ಶ್ರೀ ಮುತ್ಯಾಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಮತ್ತು ಆರತಿಗಳ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ದೇವಾಲಯವನ್ನು ವಿದ್ಯುತ್ ದೀಪಾಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಮುತ್ಯಾಲಮ್ಮ ದೇವಿ ಮೂಲ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಸಮೀಪವಿರುವ ನವಗ್ರಹ ದೇವಾಲಯ, ಕುಕ್ಕಲಮ್ಮ ಹಾಗೂ ದೊಡ್ಡಮ್ಮ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ 10ಗಂಟೆಗೆ ದೇವಾಲಯದ ಬಳಿಯಿಂದ ಹೊರಟ ಮುತ್ಯಾಲಮ್ಮ ದೇವಿಯ ಹಾಗೂ ದೊಡ್ಡಮ್ಮದೇವಿಯ ರಥೋತ್ಸವಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿ ಉತ್ಸಾಹದಿಂದ ಭಾಗವಹಿಸಿದ್ದರು. ರಥೋತ್ಸವದಲ್ಲಿ ಮಂಗಳವಾದ್ಯಗಳೊಂದಿಗೆ ಚಂಡೆ, ವೀರಗಾಸೆ, ತಮಟೆ ವಾದ್ಯ, ಪಟ್ಟದ ಕುಣಿತ, ಡೊಳ್ಳುಕುಣಿತ, ಗಾರುಡಿಬೊಂಬೆ, ಮೊದಲಾದ ಜಾನಪದ ಕಲಾ ತಂಡಗಳು, ಉತ್ಸವಕ್ಕೆ ಮೆರುಗು ನೀಡಿದ್ದವು.
ಮುತ್ಯಾಲಮ್ಮ ಜಾತ್ರಾಮಹೋತ್ಸವಕ್ಕೆ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ಶಾಂತಿನಗರ, ನಾಗಸಂದ್ರ, ಕೊಡಿಗೇಹಳ್ಳಿ, ರೋಜಿಪುರ ಸೇರಿದಂತೆ ನಗರ ಹಾಗೂ ತಾಲೂಕಿನ ಮಹಿಳೆಯರು ಹೊಂಬಾಳೆಯಲ್ಲಿ ಸಿಂಗರಿಸಿಕೊಂಡು ಬಂದಿದ್ದ ವಿವಿಧ ಮಾದರಿಯ ಆರತಿಗಳನ್ನು ದೇವಿಗೆ ಬೆಳಗಿದರು. ಮಂಗಳವಾರ ಸಂಜೆ ಕುರ್ಜುಗಳಲ್ಲಿ ಆಯಾ ಗ್ರಾಮದ ದೇವರುಗಳನ್ನು ಪ್ರತಿಷ್ಠಾಪಿಸಿಕೊಂಡು ಹೂವಿನ ಅಲಂಕಾರದೊಂದಿಗೆ ಆಗಮಿಸಿದ್ದವು. ಕುರುಬರಹಳ್ಳಿ, ಕೊಡಿಗೇಹಳ್ಳಿ ರೋಜಿಪುರ ಸೇರಿದಂತೆ ನಗರ ಹಾಗೂ ತಾಲೂಕಿನ ಗ್ರಾಮಸ್ಥರಿಂದಲು ಹೂವಿನ ಆರತಿ ಉತ್ಸವ ನಡೆಯಿತು.
ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ:
ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ಪದಾಧಿಕಾರಿಗಳು ಹಾಗೂ ಏಳೂರು ಮುಖಂಡರು ಜಾತ್ರಾ ಉತ್ಸವದ ಉಸ್ತುವಾರಿ ವಹಿಸಿ, ಸಂಭ್ರಮದ ಜಾತ್ರೆಗೆ ಕಾರಣರಾದರು.ಭಾಗವಹಿಸಿದ್ದರು. ಜಾತ್ರೆಯ ಅಂಗವಾಗಿ ನೂರಾರು ಅಂಗಡಿ ಮುಗ್ಗಟ್ಟುಗಳು ಸಾಲುಗಟ್ಟಿದ್ದವು. ಮಧ್ಯಾಹ್ನದ ನಂತರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಗರದ ರೋಜಿಪುರಕ್ಕೆ ತೆರಳಿತು. ಒಕ್ಕಲು ಕುಲದ ಗೌಡನೊಬ್ಬ ಮುತ್ಯಾಲಮ್ಮ ದೇವಿಯನ್ನು ಪ್ರಥಮ ಬಾರಿಗೆ ತನ್ನ ಮನೆಗೆ ಆಹ್ವಾನಿಸಿ ಪೂಜೆ, ಹರಕೆಗಳನ್ನು ಸಮರ್ಪಿಸಿ ಕಳುಹಿಸಿಕೊಟ್ಟ ಐತಿಹ್ಯವಿದೆ ಹಾಗಾಗಿ ಅಂದಿನಿಂದಲೂ ರೋಜಿಪುರ ಮುತ್ಯಾಲಮ್ಮದೇವಿಯ ತವರು ಮನೆಯೆಂದು ಬಿಂಬಿತವಾಗಿದ್ದು, ಇಂದಿಗೂ ಸಹ ಜಾತ್ರೆಯ ದಿನದಂದು ಹೆಣ್ಣು ಮಗಳು ತವರಿಗೆ ಹೋಗಿ ಬಂದಂತೆ ಸಂಭ್ರಮಿಸುವ ಆಚರಣೆ ನಡೆಯುತ್ತಿದೆ.
ರೋಜಿಪುರದಲ್ಲಿ ಮುತ್ಯಾಲಮ್ಮ-
ದೇವಿಯ ಜಾತ್ರೆ ಸಂಭ್ರಮ ಮನೆ ಮಾಡಿತ್ತು. ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಮುತ್ಯಾಲಮ್ಮ ಜಾತ್ರೆ ಅಂಗವಾಗಿ ಅಂಜನೇಯಸ್ವಾಮಿ ಕುರ್ಜಿನ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಹಿಳೆಯರು ಹೂವಿನ ಆರತಿಗಳನ್ನು ಹೊತ್ತು ಸಾಗಿದರು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಜನ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು.
ಒಟ್ಟಾರೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರದಲ್ಲಿ ಮುತ್ಯಾಲಮ್ಮ ದೇವಿ ಜಾತ್ರೆ ವರ್ಷದಿಂದ ವರ್ಷಕ್ಕೆ ಹೊಸ ಮೆರಗನ್ನು ನೀಡುತ್ತಿದೆ.


