ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಮಾನ್ಯ ಸರ್ವೋಚ್ಛ ನ್ಯಾಯಾಲಯದ ‘Suo Moto WP(Civil) No: 5 (ದಿನಾಂಕ: 07.11.2025)’ ರ ಆದೇಶದಂತೆ ಸೋಮವಾರ ನಗರಾದ್ಯಂತ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನೀಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವಿಶೇಷ ಕಾರ್ಯಾಚರಣೆಯನ್ನು ಸ್ಪಂದನ ಅನಿಮಲ್ ವೆಲ್ಫೇರ್ ಅಂಡ್ ಪ್ರಕೃತಿ ಸೇವಾ ಸೊಸೈಟಿಯ ಡಾ. ಅರುಣ್ ಅವರ ತಂಡ ಹಾಗೂ ಹಿರಿಯೂರು ನಗರಸಭೆಯ ಆರೋಗ್ಯ ಶಾಖೆಯ ಸಿಬ್ಬಂದಿಗಳು ಜಂಟಿಯಾಗಿ ನಡೆಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಬೀದಿ ನಾಯಿಗಳನ್ನು ಸುರಕ್ಷಿತವಾಗಿ ಹಿಡಿದು, ಅವುಗಳಿಗೆ ಲಸಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಕಾರ್ಯಾಚರಣೆ ಸ್ಥಳದಲ್ಲಿ ಅಧಿಕಾರಿಗಳ ಭೇಟಿ:
ಈ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹಿರಿಯೂರು ನಗರಸಭಾ ಪೌರಾಯುಕ್ತರಾದ ಎ. ವಾಸೀಂ ಹಾಗೂ ಡಾ. ಅರುಣ್ ಅವರು ಖುದ್ದಾಗಿ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್, ನಯಾಜ್ ಷರೀಫ್ ಹಾಗೂ ನಗರಸಭೆಯ ಸಿಬ್ಬಂದಿಗಳು ಹಾಜರಿದ್ದರು.
ಸಾರ್ವಜನಿಕರಿಗೆ ನಗರಸಭೆಯಿಂದ ಮಹತ್ವದ ಸೂಚನೆ:
"ಹಿರಿಯೂರು ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಾಕಿರುವ ನಾಯಿಗಳಿಗೆ ಕಡ್ಡಾಯವಾಗಿ ರೇಬೀಸ್ ನಿರೋಧಕ ಹಾಗೂ ಇತರ ಅಗತ್ಯ ಲಸಿಕೆಗಳನ್ನು ಹಾಕಿಸಬೇಕು. ಯಾವುದೇ ಕಾರಣಕ್ಕೂ ಸಾಕು ನಾಯಿಗಳನ್ನು ಸಾರ್ವಜನಿಕ ರಸ್ತೆಗಳಿಗೆ ಮತ್ತು ಬೀದಿಗಳಿಗೆ ಉಡಾಫೆಯಿಂದ ಬಿಡಬಾರದು."
ಎ. ವಾಸೀಂ, ಪೌರಾಯುಕ್ತರು, ನಗರಸಭೆ ಹಿರಿಯೂರು.
ನಗರವನ್ನು ಬೀದಿ ನಾಯಿಗಳ ಹಾವಳಿಯಿಂದ ಮುಕ್ತಗೊಳಿಸಲು ಮತ್ತು ನಾಗರಿಕರ, ಮುಖ್ಯವಾಗಿ ಮಕ್ಕಳ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತ ವಾಸೀ ಅವರು ಕೋರಿದ್ದಾರೆ.



