ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದ ಅವರ ಕಗ್ಗೊಲೆಯನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸಿದೆ. ಹಗಲು ಹೊತ್ತಿನಲ್ಲೇ ಇಂತಹ ಭೀಕರ ಕೃತ್ಯ ನಡೆದಿರುವುದು ಆತಂಕಕಾರಿಯಾಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಸಂಯೋಜಕ ಕೆ.ಪಿ.ಶ್ರೀನಿವಾಸ್ ಆಗ್ರಹಿಸಿದ್ದಾರೆ.
ತಾನು ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ದಲಿತರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವ ಹೊಣೆಗಾರಿಕೆ ಇದೆ. ಈ ಭೀಕರ ಕೃತ್ಯವೆಸಗಿದ ಅಪರಾಧಿಗಳನ್ನು ಹಾಗೂ ಅವರ ಹಿಂದಿರುವ ದಲಿತ ವಿರೋಧಿ ಶಕ್ತಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಸುರಕ್ಷತೆ ಮತ್ತು ರಕ್ಷಣೆ: ರಾಜ್ಯದಲ್ಲಿ ದಲಿತ ಮುಖಂಡರಿಗೆ ಇರುವ ಪ್ರಾಣಪಾಯವನ್ನು ಸರಕಾರ ಗುರುತಿಸಿ, ಅವರಿಗೆ ತಕ್ಷಣವೇ ಸೂಕ್ತ ರಕ್ಷಣೆ ಒದಗಿಸಲು ಮುಂದಾಗಬೇಕು.
ಸಾಕಷ್ಟು ಪರಿಹಾರ: ಮೃತರ ಕುಟುಂಬಕ್ಕೆ ಸರಕಾರ 50 ಲಕ್ಷ ರೂಪಾಯಿ ನಗದು ಪರಿಹಾರ, 10 ಎಕರೆ ಜಮೀನು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು.
ದಲಿತ ಸಮುದಾಯಕ್ಕೆ ರಕ್ಷಣೆ ನೀಡುವಲ್ಲಿ ಮತ್ತು ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಸರಕಾರ ವಿಫಲವಾಗಬಾರದು ಎಂದು ಕೆ.ಪಿ.ಶ್ರೀನಿವಾಸ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.



