ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಶಂಕಿತ ಭಯೋತ್ಪಾದಕನೊಬ್ಬನನ್ನು ತುಮಕೂರು ಪೊಲೀಸರು ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ತಕ್ಷಣವೇ ತುಮಕೂರಿಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಬಂಧಿತ ಯಾರು? ಹಿನ್ನೆಲೆಯೇನು?:
ದಾವಣಗೆರೆಯ ಬಿಡಿ ಲೇಔಟ್ ನಿವಾಸಿಯಾದ ಜಮೀರ್ ಖಾನ್ (22) ಬಂಧಿತ ಶಂಕಿತ ಉಗ್ರ. ಈತ ವೃತ್ತಿಯಲ್ಲಿ ಕಟ್ಟಡ ನಿರ್ಮಾಣ (ಮೇಸ್ತ್ರಿ) ಕೆಲಸ ಮಾಡಿಕೊಂಡಿದ್ದು ಹತ್ತನೇ ತರಗತಿ ಓದಿದ ಯುವಕ. ತಂದೆ, ತಾಯಿ ಹಾಗೂ ಇಬ್ಬರು ಸಹೋದರರೊಂದಿಗೆ ವಾಸವಿದ್ದ ಈತ, ಕೆಲಸದ ನಿಮಿತ್ತ ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಗೆ ಹೋಗಿ ಬರುತ್ತಿದ್ದ ಎಂದು ತಿಳಿದುಬಂದಿದೆ.
ಪಾಕ್ ಲಿಂಕ್ ಹಾಗೂ ಐಸಿಸ್ ಫಂಡಿಂಗ್ ಸೂತ್ರಧಾರರ ಸಂಪರ್ಕ:
ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಈತ ಜಾಗತಿಕ ಭಯೋತ್ಪಾದಕ ಸಂಘಟನೆ ಐಎಸ್ ಸಿಎಸ್ಗೆ (ISIS) ಫಂಡಿಂಗ್ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಪ್ರಮುಖ ಉಗ್ರರಾದ ಶಾಬಾಸ್ ಭುಟ್ಟಿ ಹಾಗೂ ರಾಣಾ ಉನೇನ್ ಎಂಬುವವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಸಂಚಿನ ಸ್ವರೂಪ: ಮುಸ್ಲಿಂ ಯುವಕರನ್ನು ಸೆಳೆದು ಭಾರತದಲ್ಲಿ ಸಂಘಟನೆಯ ಜಾಲವನ್ನು ವಿಸ್ತರಿಸುವುದು ಈತನ ಮುಖ್ಯ ಉದ್ದೇಶವಾಗಿತ್ತು.
ಮುಂಬೈ ಉದ್ಯಮಿ ಹತ್ಯೆಗೆ ಟಾಸ್ಕ್: ಈತ ಹಾಗೂ ಈಗಾಗಲೇ ತುಮಕೂರಿನಲ್ಲಿ ಬಂಧಿತನಾಗಿರುವ ಮತ್ತೊಬ್ಬ ಶಂಕಿತ ಉಗ್ರ ಅಲ್ಲಾಭಕ್ಷ್ ಎಂಬಾತನಿಗೆ ಮುಂಬೈನ ಪ್ರಮುಖ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲು ಹ್ಯಾಂಡ್ಲರ್ಗಳು 'ಟಾಸ್ಕ್' ನೀಡಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯ ವೇಳೆ ಲಭ್ಯವಾಗಿದೆ. ಆದರೆ, ಇವರು ಕೃತ್ಯ ಎಸಗುವ ಮುನ್ನವೇ ಪೊಲೀಸರು ಇಬ್ಬರನ್ನೂ ಜಾಲದ ಸಮೇತ ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಎಸ್ಪಿ ಪ್ರತಿಕ್ರಿಯೆ:
ಈ ಜಂಟಿ ಕಾರ್ಯಾಚರಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಅವರು, "ತುಮಕೂರು ಪೊಲೀಸರು ದಾವಣಗೆರೆಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿರುವ ಕುರಿತು ಪ್ರಾಥಮಿಕ ಮಾಹಿತಿ ಇದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತುಮಕೂರು ಪೊಲೀಸ್ ವಲಯದಿಂದ ಸಂಪೂರ್ಣ ವಿವರಗಳನ್ನು ಪಡೆದ ನಂತರ ಅಧಿಕೃತವಾಗಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಪ್ರಸ್ತುತ ಬಂಧಿತ ಉಗ್ರನ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸೈಬರ್ ಕ್ರೈಂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ರಾಜ್ಯದಲ್ಲಿ ಈತನಿಗೆ ಬೇರೆ ಯಾರಾದರೂ ಸಾಥ್ ನೀಡಿದ್ದರೇ ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.



