ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಹಿರಿಯೂರು ತಾಲ್ಲೂಕು ವಾಲ್ಮೀಕಿ ಸಮುದಾಯ ಹಾಗೂ ವಿವಿಧ ಪ್ರಮುಖರು ಜಂಟಿಯಾಗಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಲಿದ್ದಾರೆ. ಈ ನೂತನ ಸಚಿವ ಸಂಪುಟದಲ್ಲಿ ಶಾಸಕ ಟಿ. ರಘುಮೂರ್ತಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಮೂರು ಬಾರಿ ಶಾಸಕರಾದ ಅರ್ಹತೆ:
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ವಾಲ್ಮೀಕಿ ಸಮುದಾಯದ ಜನಸಂಖ್ಯೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಮುದಾಯವು ಅಪಾರ ಸಹಕಾರ ನೀಡಿದೆ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಟಿ. ರಘುಮೂರ್ತಿ ಅವರು ಬಡವರ ಬಂಧುವಾಗಿದ್ದು, ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ನಿರಂತರ ಸಹಾಯ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಲೇಬೇಕು ಎಂದು ನಾಯಕರು ಪ್ರತಿಪಾದಿಸಿದ್ದಾರೆ.
ಒತ್ತಾಯಿಸಿದ ಪ್ರಮುಖರು:
ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಮಂಜುನಾಥ ನಂಜಯ್ಯನಕೊಟ್ಟಿಗೆ, ಮುಖಂಡರಾದ ಮಂಜುನಾಥ ಮಾಳಿಗೆ, ಶ್ರೀನಿವಾಸ ಮಸ್ಕಲ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಂಜಿನಪ್ಪ, ಯಲ್ಲದಕರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕಣುಮಪ್ಪ, ಎಸ್.ಟಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಸೊಂಡೇಕೆರೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಚಿದಾನಂದಸ್ವಾಮಿ, ನಿವೃತ್ತ ಎಲ್.ಡಿ.ಓ. ಮಲ್ಲನಾಯಕ,
ಮುಖಂಡರಾದ ರಮೇಶ್ ನಾಗೇನಹಳ್ಳಿ, ತಿಪ್ಪೇರುದ್ರಣ್ಣ, ಈಶ್ವರಪ್ಪ ಖಂಡೇನಹಳ್ಳಿ, ಹಿರಿಯೂರಿನ ನಿವೃತ್ತ ಬಿ.ಇ.ಓ. ಜೋಗಪ್ಪ, ಹಿರಿಯೂರು ವಾಣಿ ಕಾಲೇಜು ಸದಸ್ಯ ಎಸ್. ಲೋಕೇಶ್, ವಕೀಲರಾದ ಲೋಕೇಶ್, ಮಿಲ್ಕ್ ತಿಪ್ಪೇಸ್ವಾಮಿ, ಶ್ರೀಧರ್, ಶರತ್, ಭಾನುಪ್ರಕಾಶ್ ಹಾಗೂ ಯುವ ಕಾಂಗ್ರೆಸ್ನ ಮಂಜುನಾಥ್ ಸೇರಿದಂತೆ ವಾಲ್ಮೀಕಿ ಸಮುದಾಯದ ಹಲವು ಮುಖಂಡರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪ್ರಬಲವಾಗಿ ಒತ್ತಾಯಿಸಿದ್ದಾರೆ.



