ಚಂದ್ರವಳ್ಳಿ ನ್ಯೂಸ್, ರಾಮನಗರ:
ಬಿಡದಿ ಸಮಗ್ರ ಟೌನ್ಶಿಪ್ ಯೋಜನೆಯಿಂದ ಸಂಕಷ್ಟಕ್ಕೊಳಗಾಗಿದ್ದ ರೈತರ ಪರವಾಗಿ ಜೆಡಿಎಸ್ ನಡೆಸಿದ ಕಾನೂನು ಹೋರಾಟಕ್ಕೆ ಹೈಕೋರ್ಟ್ನಲ್ಲಿ ತಾತ್ಕಾಲಿಕ ಜಯ ಸಿಕ್ಕಿದ್ದು, ಇದು ಯೋಜನೆಯ ವಿರುದ್ಧದ ಹೋರಾಟಕ್ಕೆ ಸಿಕ್ಕ ಶುಭ ಸೂಚನೆಯಾಗಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭೂಸ್ವಾಧೀನ ಪ್ರಕ್ರಿಯೆ ಮತ್ತು ಯೋಜನೆ ಅನುಷ್ಠಾನದ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರೈತರಿಗೆ ತಾತ್ಕಾಲಿಕ ರಿಲೀಫ್: ಪರಿಹಾರದ ಮೊತ್ತ ನಿಗದಿಯಾಗುವವರೆಗೂ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸದಂತೆ ಮತ್ತು ಅವರಿಗೆ ಯಾವುದೇ ತೊಂದರೆ ನೀಡದಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಈ ಯೋಜನೆಗೆ ವಿರೋಧವಿರುವ ಇನ್ನುಳಿದ ಗ್ರಾಮಗಳ ರೈತರ ವಕಾಲತ್ತು ಪತ್ರಗಳನ್ನು ಸಹ ಕೋರ್ಟ್ಗೆ ಸಲ್ಲಿಸಲಾಗಿದ್ದು, ಶುಕ್ರವಾರ ಆ ಪ್ರಕರಣಗಳ ವಿಚಾರಣೆ ನಡೆಯುವ ಸಾಧ್ಯತೆಯಿದೆ.
೨೦೧೩ರ ಕಾಯ್ದೆ ಉಲ್ಲಂಘನೆ ಆರೋಪ: ಸರ್ಕಾರ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಯೋಜನೆ ಜಾರಿಗೆ ಮುಂದಾಗಿದೆ. 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರ ಮುಂದುವರಿಯುತ್ತಿದ್ದು, ಹೈಕೋರ್ಟ್ಎಲ್ಲವನ್ನೂ ಗಮನಿಸುತ್ತಿದೆ. ಅಂತಿಮವಾಗಿ ನ್ಯಾಯಾಲಯದಲ್ಲಿ ರೈತರ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ಖಾಲಿ ಬೊಕ್ಕಸ, ಜಿಬಿಡಿಎ ಬಳಿ ಹಣವಿಲ್ಲ: ಟೌನ್ಶಿಪ್ ಯೋಜನೆ ಜಾರಿಗೆ ತರಲು ಗ್ರೇಟರ್ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಬಳಿ ಹಣವಿಲ್ಲ. ಬಿಎಂಆರ್ಡಿಎ ಆಸ್ತಿಯನ್ನು ಅಡಮಾನವಿಟ್ಟು ಸ್ವಲ್ಪ ಹಣ ಸಂಗ್ರಹಿಸಲಾಗಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಕೆಲ ರೈತರಿಗೆ ಚೆಕ್ ನೀಡಿ ಆಕರ್ಷಿಸುವ ತಂತ್ರ ಹೆಣೆಯಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ರೈತರು ಭೂಮಿ ಬಿಟ್ಟುಕೊಡುವುದಿಲ್ಲ. ರೈತರ ವಿರುದ್ಧ ಹೋಗಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ಭಿನ್ನಮತಕ್ಕೆ ಸಣ್ಣ ಟಾಂಗ್: ಸಚಿವ ಸ್ಥಾನ ಸಿಗದೆ ಕಾಂಗ್ರೆಸ್ಶಾಸಕರು ರಾಜೀನಾಮೆ ಬೆದರಿಕೆ ಹಾಕುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, "ಇದು ಅವರ ಆಂತರಿಕ ವಿಚಾರ. ಸಚಿವ ಸ್ಥಾನ ನೀಡುವುದು ಅವರ ಪಕ್ಷದ ತೀರ್ಮಾನ. ಆದರೆ, ಹಿರಿಯ ಶಾಸಕರ ಈ ನಡೆ ನಿಜವಾದ ಅಸಮಾಧಾನವೇ ಅಥವಾ ಬ್ಲಾಕ್ಮೇಲ್ ತಂತ್ರವೇ ಎಂಬುದನ್ನು ಕಾದು ನೋಡಬೇಕಿದೆ" ಎಂದರು.



