ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಭಾರತೀಯ ಜನತಾ ಪಾರ್ಟಿಯ ಪ್ರತಿ ಹೆಜ್ಜೆಯೂ ಗೆಲುವಿನ ಮೆಟ್ಟಿಲು, ಅಭಿವೃದ್ಧಿಯ ತೊಟ್ಟಿಲು” ಎಂಬುದನ್ನು ದೆಹಲಿಯ ದಿಗ್ವಿಜಯ ಸಾಕ್ಷಿಕರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿ ಅಪ್ಪಿ ದೆಹಲಿ ಮತದಾರರು ಭಾರತೀಯ ಜನತಾ ಪಾರ್ಟಿಗೆ ದಿಗ್ವಿಜಯದ ಕಿರೀಟ ತೊಡಿಸಿದ ವಿಜಯೋತ್ಸವದ ಸಂಭ್ರಮವನ್ನು ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಮುಂಭಾಗದಲ್ಲಿ ಸಡಗರ ಸಂಭ್ರಮಗಳಿಂದ ಕಾರ್ಯಕರ್ತರೊಡಗೂಡಿ ಸಂಭ್ರಮಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಸಂದೇಶವನ್ನು ದೆಹಲಿಯ ಜನತೆ ಬಿಜೆಪಿ ಗೆಲ್ಲಿಸುವ ಮೂಲಕ ಪಸರಿಸಿದ್ದಾರೆ. ಬಿಜೆಪಿಗೆ ದಾಖಲೆಯ ದಿಗ್ವಿಜಯ ದೊರಕಿಸಿಕೊಟ್ಟ ದೆಹಲಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಮೋದಿ ಅವರನ್ನು ಕರ್ನಾಟಕದ ಜನತೆಯ ಪರವಾಗಿ ಅಭಿನಂದಿಸುವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ವಿಕಸಿತ ಭಾರತದ ಸಂಕಲ್ಪ ತೊಟ್ಟು ದೇಶವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಟಗೊಳಿಸಲು ಯೋಜನೆ ರೂಪಿಸುತ್ತಿರುವ ಪ್ರಧಾನಿಯವರಿಗೆ ದೇಶದ ರಾಜಧಾನಿಯ ಗೆಲುವು ಭೀಮ ಬಲವನ್ನು ತಂದು ಕೊಟ್ಟಿದೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಹೆಗ್ಗಳಿಕೆಯ ವಿಜಯ ಸಾಧಿಸಿದೆ.
ಭಾರತೀಯ ಜನತಾ ಪಾರ್ಟಿ ದೇಶಭಕ್ತಿ ಹಾಗೂ ರಾಷ್ಟ್ರ ಕಟ್ಟುವ ಲಕ್ಷಾಂತರ ಕಾರ್ಯಕರ್ತರನ್ನೊಳಗೊಂಡ ವಿಶ್ವ ದಾಖಲೆ ನಿರ್ಮಿಸಿರುವ ರಾಜಕೀಯ ಪಕ್ಷವಾಗಿದೆ. ಬಿಜೆಪಿಯ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ನಡೆಸಿ ತಾತ್ಕಾಲಿಕ ಗೆಲುವು ಸಾಧಿಸಬಹುದೇ ಹೊರತು ಪಕ್ಷ ಸಿದ್ಧಾಂತದೊಂದಿಗೆ ಸೆಣಸಿ ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎನ್ನುವುದನ್ನು ದೆಹಲಿಯ ಫಲಿತಾಂಶ ತೋರಿಸಿಕೊಟ್ಟಿದೆ. ಭವಿಷ್ಯತ್ತಿನಲ್ಲಿ ಇದು ಕರ್ನಾಟಕದಲ್ಲೂ ಪ್ರತಿಫಲಿಸಲಿದೆ.
ದೆಹಲಿಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮಡಿಲಿಗೆ ಸಮರ್ಪಿಸಿರುವ ದೆಹಲಿಯ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಮಾರ್ಗದರ್ಶನದಲ್ಲಿ ನೂತನ ಸರಕಾರ ಕಟಿಬದ್ಧವಾಗಿ ಕೆಲಸ ಮಾಡಲಿದೆ ಎನ್ನುವುದು ದೆಹಲಿ ಚುನಾವಣೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಪಕ್ಷ ಪ್ರಮುಖರು ಹಾಗೂ ಕಾರ್ಯಕರ್ತರ ಅಭಯವಾಗಿದೆ. ಈ ಚುನಾವಣೆ ಬಿಜೆಪಿಯ ಕಾರ್ಯಕರ್ತರು ಹಾಗೂ ದೆಹಲಿಯ ಜನತೆಯ ಚಾರಿತ್ರಿಕ ಜಯವಾಗಿದೆ ಎಂದು ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಸಭಾ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಸಿ.ಟಿ ರವಿ, ಶಾಸಕ ಮುನಿರತ್ನ, ಸಂಸದರಾದ ಪಿ.ಸಿ ಮೋಹನ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಶಾಸಕರು, ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.