ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇಶ ಸೇವೆ ಈಶ ಸೇವೆ ಎಂದು ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ದುಷ್ಕರ್ಮಿಗಳ ಇರಿತಕ್ಕೆ ಒಳಗಾಗಿ ಪ್ರಾಣಾರ್ಪಣೆ ಮಾಡಿದ ಆರಕ್ಷಕ ನಿರೀಕ್ಷಕ ಜಗದೀಶ್ ರವರ 44 ನೇ ಹುಟ್ಟು ಹಬ್ಬವನ್ನು ಹುತಾತ್ಮ ಪಿಎಸ್ಐ ಜಗದೀಶ್ ಫೌಂಡೇಶನ್ ವತಿಯಿಂದ ಆಚರಿಸಲಾಯಿತು.
ನಗರದ ಹೊರವಲಯದ ಡಿ ಕ್ರಾಸ್ ಹತ್ತಿರ ಹುತಾತ್ಮ ಜಗದೀಶ್ ವೃತ್ತದಲ್ಲಿ ಆಯೋಜನೆ ಮಾಡಲಾದ ಜಗದೀಶ್ ರವರ 44 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾಧಿಕ್ ಪಾಷ ರವರು ಮಾತನಾಡಿ ಕಾನೂನು ಇರುವುದು ಜನರ ರಕ್ಷಣೆಗಾಗಿ ಅವರ ಸುರಕ್ಷತೆಗಾಗಿ ಇಲಾಖೆಯ ಸಿಬ್ಬಂದಿಗಳು ಹಗಲಿರುಳೆನ್ನದೆ ಜನರ ರಕ್ಷಣೆಗಾಗಿ ಕುಟುಂಬವನ್ನು ಬಿಟ್ಟು ಶ್ರಮಿಸುತ್ತಿರುತ್ತಾರೆ ಯಾರೋ ಕೆಲವರು ತಪ್ಪುಗಳನ್ನು ಮಾಡಿದಾಗ ಇಡಿ ಇಲಾಖೆಯನ್ನೆ ದೂಷಿಸುತ್ತಾರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಾರೆ. ಆದರೆ ದೊಡ್ಡಬಳ್ಳಾಪುರದ ಜನತೆ ಕರ್ತವ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹತ್ತು ವರ್ಷಗಳ ನಂತರವೂ ಪೋಲಿಸ್ ಅಧಿಕಾರಿಯನ್ನು ನೆನೆದು ಕಾರ್ಯಕ್ರಮ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ನಂತರ ನಗರ ಠಾಣೆಯ ಇನ್ಸ್ಪೆಕ್ಟರ್ ಅಮರೇಶ ಗೌಡರು ಮಾತನಾಡಿ ನಾವು ಎಷ್ಟು ವರ್ಷ ಬದುಕಿದ್ದೆವು ಎನ್ನುವುದಕ್ಕಿಂತ ಹೇಗೆ ಬದುಕಿದ್ದೆವು ಎಂಬುದು ಮುಖ್ಯ. ಒಳ್ಳೆಯ ಕೆಲಸ ಮಾಡಿದಾಗ ಸಮಾಜ ಎಂದಿಗೂ ನಮ್ಮನ್ನು ಮರೆಯುವುದಿಲ್ಲ. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಜನ ಗೌರವಿಸುತ್ತಾರೆ. ಅದಕ್ಕೆ ಉದಾಹರಣೆ ಜಗದೀಶ್ ರವರ ಈ ಕಾರ್ಯಕ್ರಮ. ಪೊಲೀಸರು ಹೊಗಳಿಕೆ ತೆಗಳಿಕೆಗಳಿಗೆ ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸ ಬೇಕು. ಈ ರೀತಿಯ ಕಾರ್ಯಕ್ರಮ ಗಳಿಂದ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುತ್ತದೆ ಎಂದರು.
ಇಲಾಖೆಯ ಸಿಬ್ಬಂದಿಗಳಾದ ನಗರ ಠಾಣೆಯ ಪ್ರದೀಪ್, ಮಂಜುಳ, ನಗರ ಠಾಣೆಯ ಗೋವಿಂದ ರಾಜು, ಮಂಜುನಾಥ್, ಮಹಿಳಾ ಠಾಣೆಯ ಮಹೇಶ್ ರವರನ್ನು ಸನ್ಮಾನಿಸಲಾಯಿತು.
ಹುತಾತ್ಮ ಪಿಎಸ್ಐ ಜಗದೀಶ್ ಹೆಸರಿನಲ್ಲಿ ಅನ್ನ ಸಂತರ್ಪಣೆ ಕೂಡ ನಡೆಯಿತು. ಹುತಾತ್ಮ ಪಿಎಸ್ಐ ಜಗದೀಶ್ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ರಾಜಘಟ್ಟ ರವಿ, ಕಾರ್ಯದರ್ಶಿ ರೈಲ್ವೆ ಸ್ಟೇಷನ್ ಮಲ್ಲೇಶ್,ಉಪಾಧ್ಯಕ್ಷ ಪರಮೇಶ್,ಜಗದೀಶ್ ಕುಟುಂಬದ ಸದಸ್ಯರು ಇಲಾಖೆಯ ಇತರೆ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾರ್ವಜನಿಕರು ಹಾಜರಿದ್ದರು.

