ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ರೈತರ ದೀರ್ಘಕಾಲದ ಹೋರಾಟ ಹಾಗೂ ಬೆಳೆ ಸಮೀಕ್ಷೆಯ ವರದಿಯ ಅನ್ವಯ, 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಲಕ್ಷಾಂತರ ರೂಪಾಯಿಗಳ ಮಧ್ಯಂತರ ಪರಿಹಾರ ಘೋಷಣೆಯಾಗಿದೆ ಎಂದು ಚಳ್ಳಕೆರೆ ತಾಲೂಕು ಕಸಬಾ ಹೋಬಳಿಯ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಸಿ. ಶಿವಲಿಂಗಪ್ಪ ತಿಳಿಸಿದ್ದಾರೆ.
ತೊಗರಿ ಬೆಳೆಗಾರರಿಗೆ ಪರಿಹಾರ:
ಚಳ್ಳಕೆರೆ ತಾಲ್ಲೂಕಿನ 3580 ತೊಗರಿ ಬೆಳೆಗಾರರಿಗೆ ಒಟ್ಟು 352.87 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರ ಪಾವತಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬೆಳೆ ನಷ್ಟದ ವಿವರ: ಮುಂಗಾರು ಹಂಗಾಮಿನಲ್ಲಿ ಸತತ ಆರು ವಾರಗಳ ಕಾಲ ಮಳೆ ಕೊರತೆಯಾದ ಕಾರಣ, ಇಳುವರಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಕುಂಠಿತ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಶೇ.25 ರಷ್ಟು ಬೆಳೆ ವಿಮೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಪ್ರಮುಖ ಒತ್ತಾಯಗಳು:
ಬೆಳೆ ವಿಮೆ ಯೋಜನೆಯಲ್ಲಿ ಕೇವಲ ಪ್ರಸಕ್ತ ವರ್ಷದ ಇಳುವರಿ ಪರಿಗಣಿಸದೆ, ಹಿಂದಿನ 7 ವರ್ಷಗಳ ಸರಾಸರಿ ಇಳುವರಿಯನ್ನು ಮಾನದಂಡವಾಗಿ ತೆಗೆದುಕೊಳ್ಳಬೇಕು ಎಂದು ಸಂಘವು ಒತ್ತಾಯಿಸಿದೆ.
ಯೋಜನೆ ಲಾಭ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ‘ಬಿತ್ತನೆ ಪೂರ್ವ ಯೋಜನೆ‘ ಮತ್ತು ‘ಮಧ್ಯಂತರ ಪರಿಹಾರ‘ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಸಂಘಟನೆಗಳು ಯಶಸ್ವಿಯಾಗಿವೆ.
ಧನ್ಯವಾದ ಸಮರ್ಪಣೆ: ಈ ಹೋರಾಟಕ್ಕೆ ಬೆಂಬಲ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರಾದ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಶಿವಲಿಂಗಪ್ಪ, ಉಪಾಧ್ಯಕ್ಷ ಎಂ. ಕರಿಯಪ್ಪ, ಕಾರ್ಯದರ್ಶಿ ಎಸ್. ಪ್ರಕಾಶ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಮತ್ತು ರೈತರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

