ವಿಐಎಸ್ಎಲ್ ಕಾರ್ಖಾನೆ ಮಾರಾಟಕ್ಕಿಟ್ಟ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಮಾತು ಕೊಟ್ಟಂತೆ ಮರ್ಯಾದೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆಗ್ರಹ ಮಾಡಿದ್ದಾರೆ.

 ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಏನ್ ಅಂತ ಮಾತು ಕೊಟ್ಟಿದ್ದರು. ಅವರಿಗೆ ಯಾರಾದರು ಕರೆದಿದ್ರಾ. ಅವರು ಈ ರಾಜ್ಯವನ್ನು ಆಳಿದವರು. ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ತಾನೆ. ಅದನ್ನು ನಾವು ಹೋಗಿಯೇ ಕೇಳಬೇಕಾ?. ಆಂಧ್ರಪ್ರದೇಶಕ್ಕೆ ಉಕ್ಕು ಕಾರ್ಖಾನೆಗೆ 7 ಸಾವಿರ ಕೋಟಿ ರೂ. ಕೊಡುತ್ತೀರಿ. ಈ ವಿಚಾರದಲ್ಲಿ ಯಾರಾದರೂ ಮಾತನಾಡಬೇಕಾ, ನಾನು ಮಾತನಾಡಿದ ಮೇಲೆಯೇ ಕೆಲಸ ಮಾಡುತ್ತೇನಾ?. ನಮ್ಮ ಸಿಎಂ ಅವರು ಗ್ಯಾರಂಟಿ ಯೋಜನೆಯ ಬಗ್ಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಅದರಂತೆ ಭದ್ರಾವತಿಗೆ ಬಂದು ಕುಮಾರಸ್ವಾಮಿ ಅವರು ಮಾತು ಕೊಟ್ಟಿದ್ದು ಅದರಂತೆ ಕೆಲಸ ಮಾಡಲಿ ಎಂದು ಸಚಿವರು ತಾಕೀತು ಮಾಡಿದರು.

ನಾವು ಕುಮಾರಸ್ವಾಮಿ ಅವರ ಮನೆ ಕಾಯುವುದಕ್ಕೆ ಆಗುತ್ತಾ? ವಿಐಎಸ್​ಎಲ್ ಯಾರಿಗೆ ಬರುತ್ತದೆ?. ಕಾರ್ಖಾನೆಗಾಗಿ ಗಣಿ ಭೂಮಿ ನೀಡಿದ್ದೇವೆ. ಅದನ್ನ ಎಲ್ಲಿ ಉಪಯೋಗ ಮಾಡಿಕೊಂಡಿದ್ದೀರಿ?. ಕರೆಯದೆ ಬಂದು ಹೇಳಿಕೆ ಕೊಟ್ಟು ಹೋದ್ರಲ್ಲ, ಯಾರು ಕರೆಯುತ್ತಾರೆ? ಏನು ಮಾತನಾಡದ್ತಾ ಇದ್ದೀರಿ ನೀವು ಎಂದು ಮಧು ಬಂಗಾರಪ್ಪ ಖಾರವಾಗಿ ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಎಲ್ಲದಕ್ಕೂ ಕರೆಯಬೇಕು ಅಂತಾರಲ್ಲ, ಶಿವಮೊಗ್ಗ ಸಂಸದರು ಅವರ ಜೊತೆಗೆ ಇದ್ದರಲ್ಲ, ಅವರು ಏನ್ ಮಾಡ್ತಾ ಇದ್ದರಂತೆ ಎಂದು ಸಚಿವರು ಲೇವಡಿ ಮಾಡಿದರು.
ಶರಾವತಿ ಸಂತ್ರಸ್ತರು ಸ್ಥಳಾಂತರವಾದ ಮೇಲೆ ಇಲ್ಲಿಗೆ ಬಂದು ನಾವು ಮಾಡಿದ್ದೇವೆ ಎನ್ನುತ್ತಿದ್ದಾರೆ. ಹೇಳಿಕೊಂಡು ಹೋಗಲಿ
, ಅದನ್ನೆಲ್ಲಾ ಜನರು ನೋಡುತ್ತಾರೆ ಎಂದು ಅವರು ಹೇಳಿದರು.

ಕಾರ್ಖಾನೆ ಹರಾಜು:
ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರು ಇಲ್ಲಿಗೆ ಬಂದು ನನ್ನ ಜವಾಬ್ದಾರಿ ಎಂದು ಹೇಳಿದ ಮೇಲೆ ಜವಾಬ್ದಾರಿ ತೆಗೆದುಕೊಳ್ಳಬೇಕಲ್ವಾ
?. ಎಲ್ಲಿ ತೆಗೆದುಕೊಂಡಿದ್ದಾರೆ?. ರಾಜ್ಯಕ್ಕೆ ಮೋಸ ಮಾಡಿದಂತೆ ಆಗಲ್ವಾ? ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಕೈಗಾರಿಕಾ ಸಚಿವರಾದ ಮೇಲೆ ಅವರೇ ಬಂದಿದ್ದರು, ನಾವು ಯಾರಾದರೂ ಅವರನ್ನು ಕರೆದಿದ್ವಾ? ಕಾರ್ಖಾನೆ ಪುನಶ್ಚೇತನ ಮಾಡುವುದಾಗಿ ಹೇಳಿದ್ರು. ಈಗ ಪುನಶ್ಚೇತನ ಮಾಡುತ್ತಿಲ್ಲ. ಕಾರ್ಖಾನೆ ಹರಾಜು ಮಾಡಲು ಹೊರಟಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ ಮಾಡಿದರು.

ವಿರೋಧ ಪಕ್ಷದ ಒಬ್ಬೊಬ್ಬರು ಒಂದೊಂದು ಕಡೆ ಕುಳಿತುಕೊಂಡು ಭವಿಷ್ಯ ಹೇಳಲಿ, ನಮ್ಮ ಭವಿಷ್ಯ ಜನರ ಕೈಯಲ್ಲಿ ಇದೆ. ಗ್ಯಾರಂಟಿಯಾಗಿ ನಮ್ಮ ಕೈಯಲ್ಲಿಯೇ ಇದೆ. ಅದು ಬೇರೆಯವರ ಕೈಯಲ್ಲಿ ಇಲ್ಲ ಎಂದು ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಇರಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

ಸಿಎಂ ಬಜೆಟ್ ಕುರಿತು ವಿವಿಧ ಇಲಾಖೆಗಳ ಸಭೆ ನಡೆಸಲಿದ್ದಾರೆ. ಇಂದು ಎಲ್ಲಾ ಇಲಾಖೆಯ ಸಭೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಹಲವು ಕಲಿಕಾ ಯೋಜನೆಯನ್ನು ತರಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಿಂದ ಅನೇಕ ವಿಷಯಗಳನ್ನು ಸಿಎಂ ಗಮನಕ್ಕೆ ತರಲಾಗಿದೆ. ನೀರಾವರಿ, ಆಡಳಿತಾತ್ಮಕ ಯೋಜನೆಗಳ ಬಗ್ಗೆ ಗಮನಕ್ಕೆ ತರಲಾಗಿದೆ. ಹೊಸ ಜಿಲ್ಲಾಸ್ಪತ್ರೆಗೆ ದಿನೇಶ್ ಗುಂಡೂರಾವ್ ಅವರ ಜೊತೆ ಮಾತನಾಡಿದ್ದೇನೆ. ಅವರು ಆಸ್ಪತ್ರೆಗೆ ಜಾಗ ಬೇಕೆಂದು ಕೇಳಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಸಚಿವರು ತಿಳಿಸಿದರು.

 

Share This Article
error: Content is protected !!
";