ಚಂದ್ರವಳ್ಳಿ ನ್ಯೂಸ್, ರಾಮನಗರ:
ಬಿಡದಿಯ ಫಲವತ್ತಾದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಒಪ್ಪಿಸಲು ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ ಎಂದು ಆರೋಪಿಸಿ ಬಿಡದಿಯ ನೂರಾರು ರೈತರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಈ ನೀತಿಯನ್ನು "ಸರ್ಕಾರಿ ಪ್ರಾಯೋಜಿತ ಭೂಹಗರಣ" ಎಂದು ಕರೆದಿರುವ ರೈತರು, "ನಮ್ಮ ಭೂಮಿ, ನಮ್ಮ ಹಕ್ಕು" ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ನೇರವಾಗಿ ಪತ್ರ ಬರೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಜನಪರ ಹೋರಾಟದ ಕರೆಗೆ ಬಿಡದಿ ಭಾಗದ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸರ್ಕಾರದ ವಿರುದ್ಧ ಬೃಹತ್ ಹೋರಾಟದ ಮುನ್ಸೂಚನೆ ಸಿಕ್ಕಿದೆ.
ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಕೇಳಿರುವ ನೇರ ಪ್ರಶ್ನೆಗಳು:
ಬಡವರ ವಿರೋಧಿ ನೀತಿ ಯಾರ ಹಿತಕ್ಕಾಗಿ?
ಭೂಸ್ವಾಧೀನದಿಂದಾಗಿ ಬೀದಿಗೆ ಬೀಳುತ್ತಿರುವವರಲ್ಲಿ ಶೇಕಡಾ 80 ರಷ್ಟು ಮಂದಿ ಸಣ್ಣ ಹಿಡುವಳಿದಾರರು, ದಲಿತರು ಹಾಗೂ ಹಿಂದುಳಿದ ವರ್ಗದವರಾಗಿದ್ದಾರೆ. ಇಂತಹ ಬಡ ರೈತರ ಹಕ್ಕನ್ನು ಕಸಿಯುತ್ತಿರುವುದು ಯಾರ ಹಿತಾಸಕ್ತಿ ಕಾಯಲು ಎಂದು ಜೆಡಿಎಸ್ ಪ್ರಶ್ನಿಸಿದೆ.
ಕಾನೂನು ಉಲ್ಲಂಘಿಸಿ ಏಕಪಕ್ಷೀಯ ಅಧಿಸೂಚನೆ ಏಕೆ?
2013ರ ಭೂಸ್ವಾಧೀನ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಸಾರ್ವಜನಿಕರಿಂದ ಯಾವುದೇ ಅಹವಾಲು ಆಲಿಸದೇ, ಕನಿಷ್ಠ ರೈತರ ಒಪ್ಪಿಗೆಯನ್ನೂ ಪಡೆಯದೇ ಸರ್ಕಾರ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿರುವುದರ ಹಿಂದಿನ ಮರ್ಮವೇನು ಎಂದು ತರಾಟೆಗೆ ತೆಗೆದುಕೊಂಡಿದೆ.
33,000 ಕೋಟಿ ದಂಧೆಯ ಲಾಭ ಯಾರಿಗೆ?
ಖುದ್ದು ಆರ್ಥಿಕ ಇಲಾಖೆಯೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಹಡ್ಕೋ ಸಂಸ್ಥೆಯಿಂದ ಸಾವಿರಾರು ಕೋಟಿ ಸಾಲ ಪಡೆದು ರೈತರ ಜಮೀನು ಕಿತ್ತುಕೊಳ್ಳಲಾಗುತ್ತಿದೆ. ಈ ರೀತಿ ರೈತರ ಜಮೀನನ್ನು ಕಾರ್ಪೊರೇಟ್ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವ ಸಂಚು ಯಾರಿಗೆ ಲಾಭ ಮಾಡಿಕೊಡಲು ರೂಪಿಸಲಾಗಿದೆ ಎಂದು ಜೆಡಿಎಸ್ ನೇರವಾಗಿ ಸವಾಲು ಹಾಕಿದೆ.
ಜೆಡಿಎಸ್ ಕಠಿಣ ನಿಲುವು:
"ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ, ಅವರ ಒಪ್ಪಿಗೆಯಿಲ್ಲದೆ ಒಂದು ಇಂಚು ಭೂಮಿಯನ್ನೂ ಮುಟ್ಟಲು ನಾವು ಬಿಡುವುದಿಲ್ಲ. ಅನ್ನ ನೀಡುವ ರೈತರಿಗೆ ಸಂಪೂರ್ಣ ನ್ಯಾಯ ಸಿಗುವವರೆಗೂ ಜೆಡಿಎಸ್ ಪಕ್ಷ ಈ ಬಿಡದಿ ಟೌನ್ಶಿಪ್ಯೋಜನೆ ವಿರುದ್ಧ ಅವಿರತವಾಗಿ ಹೋರಾಟ ನಡೆಸಲಿದೆ."
ಬಿಡದಿ ಟೌನ್ಶಿಪ್ಹೆಸರಿನಲ್ಲಿ ನಡೆಯುತ್ತಿರುವ ಈ ಭೂಸ್ವಾಧೀನ ಪ್ರಕ್ರಿಯೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದು, ಜೆಡಿಎಸ್ ಹಾಗೂ ರೈತರ ಜಂಟಿ ಹೋರಾಟ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.



