ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ ಪರೀಕ್ಷೆ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ, ಯೂತ್ ಕಾಂಗ್ರೆಸ್ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕೇಂದ್ರ ಸರ್ಕಾರಕ್ಕೆ ಪರೀಕ್ಷೆ ನಡೆಸುವ ಯೋಗ್ಯತೆಯಿಲ್ಲ. ಇನ್ನು ಮುಂದೆ ನೀವು ನೀಟ್ ಪರೀಕ್ಷೆ ನಡೆಸುವುದನ್ನು ನಿಲ್ಲಿಸಿ, ಆಯಾ ರಾಜ್ಯಗಳಿಗೇ ಅದರ ಜವಾಬ್ದಾರಿಯನ್ನು ಬಿಟ್ಟುಕೊಡಿ" ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಚಿಬ್ ಸೇರಿದಂತೆ ರಾಜ್ಯ ಸರ್ಕಾರದ ಪ್ರಮುಖ ಸಚಿವರು ಭಾಗವಹಿಸಿದ್ದರು.
"ದುಡ್ಡು ಇದ್ದವರಿಗಷ್ಟೇ ನೀಟ್ ಅನುಕೂಲ":ಸಿದ್ದರಾಮಯ್ಯ ಆಕ್ರೋಶ
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ಸೋರಿಕೆಯ ಸರಮಾಲೆ: 2016ರಲ್ಲಿ ನೀಟ್ ಜಾರಿಗೆ ಬಂದಾಗಿನಿಂದ ಒಟ್ಟು 5 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ವರ್ಷವಿಡೀ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಇದರಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಕೋಚಿಂಗ್ ಮಾಫಿಯಾ: ನೀಟ್ ಪರೀಕ್ಷೆಯಿಂದಾಗಿ ಬಡವರು ಹಾಗೂ ಶ್ರೀಮಂತರ ನಡುವೆ ಭೇದಭಾವ ಸೃಷ್ಟಿಯಾಗಿದೆ. ದುಡ್ಡಿರುವವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್ ಸೆಂಟರ್ಗೆ ಹೋಗುತ್ತಾರೆ. ಬಡವರು, ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗದವರಿಗೆ ಇದರಿಂದ ಅನ್ಯಾಯವಾಗುತ್ತಿದೆ.
ಸಿಇಟಿಗೆ ಅವಕಾಶ ಕೊಡಿ: ಹಿಂದೆ ರಾಜ್ಯದಲ್ಲಿ ಸಿಇಟಿ ಮೂಲಕ ಅತ್ಯಂತ ಪಾರದರ್ಶಕವಾಗಿ ವೈದ್ಯಕೀಯ ಪ್ರವೇಶಾತಿ ನಡೆಸಲಾಗುತ್ತಿತ್ತು. ಕೇಂದ್ರ ಸರ್ಕಾರ ಮಾತು ಎತ್ತಿದರೆ 'ಒಕ್ಕೂಟ ವ್ಯವಸ್ಥೆ' ಎನ್ನುತ್ತದೆ, ಆದರೆ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ತಕ್ಷಣವೇ ರಾಜ್ಯಗಳಿಗೆ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಚಿವರುಗಳ ಖಡಕ್ ಎಚ್ಚರಿಕೆ:
"ನಾವು ನೀಟ್ನಿಂದ ಹಿಂದೆ ಸರಿಯುತ್ತೇವೆ"
"ಕಳೆದ ಆರು ವರ್ಷಗಳಿಂದ ನೀಟ್ ಪರೀಕ್ಷೆಯಲ್ಲಿ ಗೊಂದಲ ಮುಂದುವರಿದಿದೆ. ಈ ಬಗ್ಗೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆದಿವೆ. ಕೇಂದ್ರ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮಾರಾಟಕ್ಕಿಟ್ಟಿದೆ. ಇನ್ನು ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ರಾಜ್ಯ 'ನೀಟ್' ಪರೀಕ್ಷೆಯಿಂದಲೇ ಹಿಂದೆ ಸರಿಯಲಿದೆ."
ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ.
"ನೀಟ್ ಫಲಿತಾಂಶಕ್ಕೆ ನಾವು ಕಾಯುವುದಿಲ್ಲ":
"ಕೋಚಿಂಗ್ ಸೆಂಟರ್ ನಡೆಸುವವರೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ದೊಡ್ಡ ದಂಧೆ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ಗೆ ಹೋಗಿ ಪರೀಕ್ಷೆ ನಡೆಸಲು ನಮ್ಮ ಕೈಲಾಗಲ್ಲ ಎಂದು ಒಪ್ಪಿಕೊಳ್ಳಿ. ನಾವು ಇಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸ್ಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುತ್ತೇವೆ. ನೀಟ್ ಫಲಿತಾಂಶಕ್ಕಾಗಿ ಇನ್ನು ಕಾಯುವ ಪ್ರಶ್ನೆಯೇ ಇಲ್ಲ."
ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ.
'ಪೇಪರ್ ಲೀಕ್ ಪೇ ಚರ್ಚೆ' ಮಾಡಿ: ಸುರ್ಜೆವಾಲಾ ಲೇವಡಿ
ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, "ಮೋದಿ ಸರ್ಕಾರ ಇಡೀ ಶಿಕ್ಷಣವನ್ನು ಮಾಫಿಯಾಗಳಿಗೆ ಒಪ್ಪಿಸಿದೆ. ಪ್ರಧಾನಿಯವರು ಮೊದಲು 'ಪರೀಕ್ಷಾ ಪೇ ಚರ್ಚಾ' ಮಾಡುವುದನ್ನು ಬಿಟ್ಟು, 'ಪೇಪರ್ ಲೀಕ್ ಪೇ ಚರ್ಚೆ' ನಡೆಸಲಿ" ಎಂದು ವ್ಯಂಗ್ಯವಾಡಿದರು.
ಮಧ್ಯಪ್ರದೇಶದ ವ್ಯಾಪಂ ಹಗರಣದ ಪ್ರಮುಖ ಸೂತ್ರಧಾರಿಗಳು ಇಂದು ಜೈಲಿನಲ್ಲಿರಬೇಕಾದವರು ಕೇಂದ್ರ ಸಂಪುಟದಲ್ಲಿದ್ದಾರೆ ಎಂದು ಆರೋಪಿಸಿದರು.
ಕುತೂಹಲ ಮೂಡಿಸಿದ "I AM COCKROACH" ಟೀ ಶರ್ಟ್!:
ಇದೇ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು "PM IS COMPROMISED, I AM COCKROACH" ಎಂಬ ಬರಹವಿರುವ ವಿಶಿಷ್ಟ ಟೀ ಶರ್ಟ್ಗಳನ್ನು ಬಿಡುಗಡೆ ಮಾಡಿದರು.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಆನ್ಲೈನ್ ಟ್ರೆಂಡ್ಗೆ ಬೆಂಬಲ ಸೂಚಿಸಲು ಯುವ ಕಾಂಗ್ರೆಸ್ ಈ ನೂತನ ಶೈಲಿಯ ಪ್ರತಿಭಟನಾ ಹಾದಿ ಹಿಡಿದಿದ್ದು ಎಲ್ಲರ ಗಮನ ಸೆಳೆಯಿತು.



