Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇತಿಹಾಸದಲ್ಲೇ ಅತಿ ದೊಡ್ಡ ಏಕಶಿಲಾ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸಿದ ‘ಮೇಘಾ ಇಂಜಿನಿಯರಿಂಗ್‌’

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಲ್ಲಿನ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ಯೋಜನೆಗಾಗಿ ಭಾರತೀಯ ಪರಮಾಣು ವಿದ್ಯುತ್ ನಿಗಮದ ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರಮಾಣದ ಏಕಶಿಲಾ (ಮೊನೊಲಿಥಿಕ್) ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಸಂಸ್ಥೆಯ ಮೊದಲ ಪರಮಾಣು ವಲಯದ ಯೋಜನೆಯಾಗಿದ್ದು, ಅತಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ.

ಈ ಬೃಹತ್ ಕಾರ್ಯಾಚರಣೆಯಲ್ಲಿ ಪ್ರತಿ ಘನ ಮೀಟರ್‌ಗೆ 360 ಕೆ.ಜಿ ತೂಕದ ಕಬ್ಬಿಣದ ಸರಳುಗಳ ಸಾಂದ್ರತೆಯೊಂದಿಗೆ, ಸುಮಾರು 7,250 ಘನ ಮೀಟರ್‌ನಷ್ಟು ಕಾಂಕ್ರೀಟ್ ಅನ್ನು ನಿರಂತರವಾಗಿ ಸುರಿಯಲಾಗಿದೆ. ತನ್ನ ಮೊದಲ ಪರಮಾಣು ಯೋಜನೆಯಲ್ಲೇ ಬೃಹತ್ ಪ್ರಮಾಣದ ನಿರಂತರ ಕಾಂಕ್ರೀಟ್ ಕಾಮಗಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಕಂಪನಿಯ ಅತ್ಯುನ್ನತ ಇಂಜಿನಿಯರಿಂಗ್ ಸಾಮರ್ಥ್ಯ, ನಿಖರ ಯೋಜನೆ ಮತ್ತು ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

ಬೃಹತ್ ಸಿದ್ಧತೆ ಮತ್ತು ತಂತ್ರಜ್ಞಾನ:
ಈ ಬೃಹತ್ ಕಾಮಗಾರಿಯನ್ನು ಗುಣಮಟ್ಟ ಹಾಗೂ ನಿಗದಿತ ಸಮಯದೊಳಗೆ ಯಾವುದೇ ಅಡಚಣೆಯಿಲ್ಲದೆ ಪೂರ್ಣಗೊಳಿಸಲು ಅಗಾಧ ಪ್ರಮಾಣದ ಕಚ್ಚಾ ಸಾಮಗ್ರಿ, ಯಂತ್ರೋಪಕರಣ ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲಾಗಿತ್ತು. ಕಾಮಗಾರಿಗಾಗಿ ಎಂ.ಇ.ಐ.ಎಲ್ ಸಂಸ್ಥೆಯು ಗಂಟೆಗೆ 360 ಘನ ಮೀಟರ್ ಸಾಮರ್ಥ್ಯದ ತಾಪಮಾನ ನಿಯಂತ್ರಿತ ಕಾಂಕ್ರೀಟ್ ಉತ್ಪಾದನಾ ಘಟಕವನ್ನು ಸ್ಥಾಪಿಸಿತ್ತು. ಕಾಂಕ್ರೀಟ್ ತಾಪಮಾನವನ್ನು 19 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾಯ್ದುಕೊಳ್ಳಲಾಗಿತ್ತು ಹಾಗೂ ಗಂಟೆಗೆ 340 ಘನ ಮೀಟರ್ ಸಾಮರ್ಥ್ಯದ ಕಾಂಕ್ರೀಟ್ ಪಂಪ್‌ಗಳನ್ನು ನಿಯೋಜಿಸಲಾಗಿತ್ತು.‌

ಕಾಂಕ್ರೀಟ್ ಮಿಶ್ರಣವನ್ನು ತಂಪಾಗಿಸಲು ಮತ್ತು ಉಷ್ಣಾಂಶವನ್ನು ನಿಯಂತ್ರಣದಲ್ಲಿಡಲು ದಿನಕ್ಕೆ 510 ಟನ್ ಸಾಮರ್ಥ್ಯದ ಐಸ್ ಉತ್ಪಾದನಾ ಘಟಕ ಹಾಗೂ 400 ಮೆಟ್ರಿಕ್ ಟನ್ ಸಾಮರ್ಥ್ಯದ ಐಸ್ ಸಂಗ್ರಹಣಾ ಗೋದಾಮನ್ನು ನಿರ್ಮಿಸಲಾಗಿತ್ತು. ಇದರೊಂದಿಗೆ 2,600 ಮೆಟ್ರಿಕ್ ಟನ್ ಸಾಮರ್ಥ್ಯದ ಸಿಮೆಂಟ್ ಮತ್ತು ಫ್ಲೈ-ಆಶ್ ಸಂಗ್ರಹಣಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಕಾಮಗಾರಿ ಆರಂಭಕ್ಕೂ ಮುನ್ನವೇ ಅಗತ್ಯವಿದ್ದ ಎಲ್ಲಾ ಕಾಂಕ್ರೀಟ್ ಸಾಮಗ್ರಿಗಳನ್ನು 100% ಲಭ್ಯವಿರಿಸಿಕೊಳ್ಳುವ ಮೂಲಕ ನಿರಂತರ ಕಾರ್ಯಾಚರಣೆಗೆ ಹಾದಿ ಸುಗಮಗೊಳಿಸಲಾಗಿತ್ತು.

ಸವಾಲುಗಳ ಮೆಟ್ಟಿನಿಂತು ಸಾಧನೆ:
ದಟ್ಟವಾದ ಮಳೆಕಾಡು ಹಾಗೂ ಭಾರಿ ಮಳೆಯಾಗುವ ಕೈಗಾ ಪ್ರದೇಶದ ಭೌಗೋಳಿಕ ಪರಿಸರವು ಭಾರಿ ಸವಾಲನ್ನು ಒಡ್ಡಿತ್ತು. ಮಳೆಯಿಂದಾಗಿ ಕಾಮಗಾರಿಗೆ ಯಾವುದೇ ಅಡ್ಡಿಯಾಗದಂತೆ ತಡೆಯಲು ಎಂ.ಇ.ಐ.ಎಲ್ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನದ 75 ಮೀಟರ್ ವ್ಯಾಸದ ಬೃಹತ್ ಮಳೆ ರಕ್ಷಣಾ ವ್ಯವಸ್ಥೆಯನ್ನು (ರೇನ್ ಪ್ರೊಟೆಕ್ಷನ್ ಸಿಸ್ಟಮ್) ನಿರ್ಮಿಸಿತ್ತು. ಇದು ಬಿರುಗಾಳಿ-ಮಳೆಯ ನಡುವೆಯೂ ಕಾರ್ಮಿಕರ ಸುರಕ್ಷತೆ ಮತ್ತು ಕಾಂಕ್ರೀಟ್‌ನ ಗುಣಮಟ್ಟವನ್ನು ಕಾಪಾಡಲು ನೆರವಾಯಿತು. ಪರಮಾಣು ವಲಯದ ಕಠಿಣ ನಿಯಮಾವಳಿಗಳಿಗೆ ಅನುಗುಣವಾಗಿ, ಗುಣಮಟ್ಟದ ತಪಾಸಣೆ ಮತ್ತು ನಿಖರವಾದ ಸಮನ್ವಯತೆಯನ್ನು ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.‌

ಹಗಲಿರುಳು ಶ್ರಮಿಸಿದ ಸಿಬ್ಬಂದಿ:
ಈ ಐತಿಹಾಸಿಕ ಕಾರ್ಯವನ್ನು ಯಶಸ್ವಿಗೊಳಿಸಲು ನೂರಾರು ಇಂಜಿನಿಯರ್‌ಗಳು, ಮೇಲ್ವಿಚಾರಕರು, ಗುಣಮಟ್ಟ ನಿಯಂತ್ರಣ ತಜ್ಞರು, ತಂತ್ರಜ್ಞರು ಮತ್ತು ನುರಿತ ಕಾರ್ಮಿಕರು ಹಗಲಿರುಳು ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡಿದ್ದಾರೆ. ಪ್ರತಿಕೂಲ ಹವಾಮಾನದ ನಡುವೆಯೂ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ರಚನಾತ್ಮಕ ದೃಢತೆ ಹಾಗೂ ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರೀತಿಯ ಪರಮಾಣು ವಲಯದ ಪರೀಕ್ಷೆಗಳನ್ನು ನಡೆಸಲಾಗಿದೆ.

ಭಾರತವು ತನ್ನದೇ ಆದ ಸ್ವದೇಶಿ ಪರಮಾಣು ಇಂಧನ ಯೋಜನೆಯನ್ನು ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿ, ಕೈಗಾ 5 ಮತ್ತು 6ನೇ ಘಟಕಗಳ ಈ ಐತಿಹಾಸಿಕ ಸಾಧನೆಯು ದೇಶದ ಹಸಿರು ಮತ್ತು ಶುದ್ಧ ಇಂಧನ ಮಿಷನ್‌ಗೆ ಎಂಇಐಎಲ್ ನೀಡಿದ ಪ್ರಮುಖ ಕೊಡುಗೆಯಾಗಿದೆ. ಈ ಯಶಸ್ಸು ಭವಿಷ್ಯದಲ್ಲಿ ಅಣು ವಿದ್ಯುತ್ ವಲಯದ ಮತ್ತಷ್ಟು ಕಾರ್ಯತಂತ್ರದ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕಂಪನಿಗೆ ರಹದಾರಿಯಾಗಿದೆ ಎಂದು ಸಂಸ್ಥೆ ಈ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.