ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ್ದು, ವೋಟ್ ಬ್ಯಾಂಕ್ ದುರಾಸೆಯಿಂದ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಪ್ರಮುಖ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರೂ ಪ್ರಧಾನಿಯಾಗಬಾರದು ಎಂದು ಕಾಂಗ್ರೆಸ್ ಬಯಸಿದೆ. ಆದರೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಭಾರತವನ್ನು ಜಗತ್ತಿನ ಮಹಾಶಕ್ತಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
"ದಲಿತರು, ಹಿಂದುಳಿದವರ ಹತ್ಯೆಯಾದರೂ ಸಿಎಂ, ಸಚಿವರಿಗೆ ಕಾಳಜಿಯಿಲ್ಲ" ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ ವಿಜಯೇಂದ್ರ, ಸರ್ಕಾರದ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.
ಸಚಿವರ ಉದಾಸೀನತೆ: ಯಲ್ಲಾಪುರದಲ್ಲಿ ದಲಿತ ಹೆಣ್ಣುಮಗಳ ಹತ್ಯೆಯಾದರೂ ಮತ್ತು ಕೊಪ್ಪಳದಲ್ಲಿ ಪರಿಶಿಷ್ಟ ಪಂಗಡದ ವ್ಯಕ್ತಿಯ ಕೊಲೆಯಾದರೂ ಯಾವೊಬ್ಬ ಸಚಿವರೂ ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ.
ಹಾವೇರಿ-ನರೇಗಲ್ ಘಟನೆ: ನರೇಗಲ್ನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಪಟಾಕಿ ಹೊಡೆದರು ಎಂಬ ಕಾರಣಕ್ಕೆ ಕುರುಬ ಸಮಾಜದ ಲೋಹಿತ್ ಹಾಗೂ ಶಿವರಾಮ ಅವರ ಮನೆಗೆ ನುಗ್ಗಿ ಕೈ ಕತ್ತರಿಸಿ ಹಲ್ಲೆ ಮಾಡಲಾಗಿದೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಅಲ್ಲಿಗೆ ಭೇಟಿ ನೀಡಿಲ್ಲ. ಈ ನಾಲಾಯಕ್ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂದು ಜನ ಆಡುವಂತಾಗಿದೆ.
ಬಿಜೆಪಿಯಿಂದ ಸಾಮಾಜಿಕ ನ್ಯಾಯ: ಹಿಂದುಳಿದ ವರ್ಗಗಳಿಗೆ ಬಿಜೆಪಿ ಸದಾ ಒತ್ತು ನೀಡಿದೆ. ಸ್ವತಃ ಪ್ರಧಾನಿ ಮೋದಿಯವರೇ ಹಿಂದುಳಿದ ಸಮಾಜದವರಾಗಿದ್ದು, ಅವರ ಸಂಪುಟದಲ್ಲಿ 27 ಜನ ಒಬಿಸಿ ಸಚಿವರಿದ್ದಾರೆ. ಇದನ್ನು ಸಹಿಸದೆ ಕಾಂಗ್ರೆಸ್ ಸದಾ ದಾಳಿ ಮಾಡುತ್ತಿರುತ್ತದೆ ಎಂದರು.
ಸತೀಶ್ ಜಾರಕಿಹೊಳಿ ಆಪ್ತ ಸದಾಶಿವ ದೇಶಿಂಗೆ ಬಿಜೆಪಿಗೆ ಸೇರ್ಪಡೆ:
ಇದೇ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಯಭಾಗ ಕ್ಷೇತ್ರದ ಪ್ರಮುಖ ಮುಖಂಡ, ಕೆಎಂಎಫ್ ಮಾಜಿ ನಿರ್ದೇಶಕ ಸದಾಶಿವ ವಸಂತ ದೇಶಿಂಗೆ ಅವರು ಅಧಿಕೃತವಾಗಿ ಬಿಜೆಪಿ ಸೇರಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ರಾಯಣ್ಣ ಗೋಗ್ರೀನ್ ಫೌಂಡೇಷನ್ ಅಧ್ಯಕ್ಷರೂ ಆಗಿರುವ ದೇಶಿಂಗೆ ಅವರ ಸೇರ್ಪಡೆಯಿಂದ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಹಾಲುಮತ ಸಮಾಜಕ್ಕೆ ಬಿಜೆಪಿ ಕೊಡುಗೆ:
"ಹಾಲುಮತ (ಕುರುಬ) ಸಮಾಜವು ಪ್ರಾಮಾಣಿಕತೆಗೆ ಹೆಸರಾಗಿದೆ. ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕನಕದಾಸ ಜಯಂತಿಗೆ ಸರ್ಕಾರಿ ರಜೆ ಘೋಷಿಸಿ, ಕಾಗಿನೆಲೆ ಪೀಠಕ್ಕೆ ಕೋಟ್ಯಂತರ ಅನುದಾನ ನೀಡಿದ್ದರು.
ಬೈರತಿ ಬಸವರಾಜು, ಎಂ.ಟಿ.ಬಿ ನಾಗರಾಜ್ ಮಂತ್ರಿ ಸ್ಥಾನ ತ್ಯಾಗ ಮಾಡಿ ಬಂದಾಗ ಬಿಜೆಪಿ ಅವರಿಗೆ ಗೌರವ ನೀಡಿತು. ಸಿ.ಎಚ್ ವಿಜಯಶಂಕರ್ ಅವರನ್ನು ಎಂಎಲ್ಸಿ ಮಾಡಿ ಸಚಿವರನ್ನಾಗಿಸಿದ್ದು, ಇತ್ತೀಚೆಗೆ ಪ್ರೊ. ನಾಗರಾಜು ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದು ಇದೇ ಬಿಜೆಪಿ" ಎಂದು ವಿಜಯೇಂದ್ರ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.



