ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ವಾಣಿ ವಿಲಾಸ ಸಾಗರ (ವಿವಿ ಸಾಗರ) ಜಲಾಶಯದಿಂದ ವಿವಿಧ ಕುಡಿಯುವ ನೀರು ಹಾಗೂ ಕೈಗಾರಿಕಾ ಯೋಜನೆಗಳಿಗೆ ಬೇಕಾಬಿಟ್ಟಿ ನೀರು ಹಂಚಿಕೆ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಜಲಾಶಯ ಸಂಪೂರ್ಣ ಬರಿದಾಗುವ ಆತಂಕ ಎದುರಾಗಿದೆ. ಹೀಗೇ ಮುಂದುವರಿದರೆ ವಿವಿ ಸಾಗರಕ್ಕೆ ಉಳಿಗಾಲವಿಲ್ಲ," ಎಂದು ಭದ್ರಾ ಮೇಲ್ದಂಡೆ ಹಾಗೂ ವಿವಿಸಾಗರ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಿತಿಯ ಪ್ರಮುಖ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಲಾಶಯದ ನೀರಿನ ಮೇಲಿನ ವಿಪರೀತ ಒತ್ತಡ ಹಾಗೂ ಹಂಚಿಕೆಯಾಗಿರುವ ಅಂಕಿ-ಅಂಶಗಳನ್ನು ಅವರು ಸಭೆಯ ಮುಂದಿಟ್ಟರು.
ಜಲಾಶಯದ ನೀರು ಎಲ್ಲೆಲ್ಲಿಗೆ ಹಂಚಿಕೆಯಾಗಿದೆ? (ಟಿ.ಎಂ.ಸಿ ಲೆಕ್ಕಾಚಾರ):
ವಿವಿ ಸಾಗರದಿಂದ ಸದ್ಯ ಅಧಿಕೃತವಾಗಿ ಅನುಮತಿ ನೀಡಿರುವ ಹಾಗೂ ಬಳಕೆಯಾಗುತ್ತಿರುವ ನೀರಿನ ವಿವರ ಹೀಗಿದೆ:
ಡಿಆರ್ಡಿಒ, ಐಐಎಸ್ಸಿ, ಬಿಎಆರ್ಸಿ ಮತ್ತು 18 ಹಳ್ಳಿಗಳು: 0.980 ಟಿಎಂಸಿ (ಚಳ್ಳಕೆರೆ, ಚಿತ್ರದುರ್ಗ ಮಾರ್ಗ)
ಹೊಳಲ್ಕೆರೆ ತಾಲೂಕಿನ 198 ಹಳ್ಳಿಗಳು (ಬಹುಗ್ರಾಮ ಯೋಜನೆ): 0.357 ಟಿಎಂಸಿ, ಹಿರಿಯೂರು ತಾಲೂಕಿನ 131 ಹಳ್ಳಿಗಳು (ಬಹುಗ್ರಾಮ ಯೋಜನೆ): 0.220 ಟಿಎಂಸಿ, ಐಮಂಗಳ ಭಾಗದ 37 ಹಳ್ಳಿಗಳು (ರಾಜೀವ್ ಗಾಂಧಿ ಸಬ್ಮಿಶನ್): 0.0150 ಟಿಎಂಸಿ, ಚಳ್ಳಕೆರೆ ಕ್ಷೇತ್ರ (ಕುಡಿಯುವ ನೀರು): 0.25 ಟಿಎಂಸಿ, ಮೇ. ಕಿರ್ಲೋಸ್ಕರ್ ಸ್ಟೀಲ್ ಲಿಮಿಟೆಡ್: 0.0353 ಮತ್ತು 0.034 ಟಿಎಂಸಿ, ಜೆ.ಜೆ.ಹಳ್ಳಿ ಹೋಬಳಿ ಕಲ್ವಳ್ಳಿ ಭಾಗದ ಕೆರೆಗಳು: 0.370 ಟಿಎಂಸಿ
ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲೂಕು ಕೆರೆಗಳಿಗೆ: 0.25 ಟಿಎಂಸಿಧರ್ಮಪುರ ಭಾಗದ 7 ಕೆರೆಗಳು (ಹೊಸಳ್ಳಿ ಬಳಿ): ನೀರು ತುಂಬಿಸಲು ಬಳಕೆ.
ಬರಡಾಗುವ ಆತಂಕ ಯಾಕೆ?: ಈ ಎಲ್ಲಾ ಯೋಜನೆಗಳ ಜೊತೆಗೆ ವರ್ಷಕ್ಕೆ ಸರಾಸರಿ 1.257 ಟಿಎಂಸಿ ನೀರು ಆವಿಯಾಗುತ್ತದೆ. ಇಂಗಿ ಹೋಗುವ ನೀರಿನ ಪ್ರಮಾಣ ಲೆಕ್ಕಕ್ಕೆ ಸಿಕ್ಕಿಲ್ಲ. ಸದ್ಯದ ಮಾಹಿತಿ ಪ್ರಕಾರ ವಿವಿ ಸಾಗರ ಜೀವಂತವಾಗಿರಲು ಕನಿಷ್ಠ 9 ಟಿಎಂಸಿ ನೀರು ಜಲಾಶಯಕ್ಕೆ ಬೇಕೇ ಬೇಕು. ಆದರೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರಕ್ಕೆ ಮೀಸಲಿಟ್ಟಿರುವುದು ಕೇವಲ 2 ಟಿಎಂಸಿ ನೀರು ಮಾತ್ರ!
"ಶಾಸಕರೆಲ್ಲರ ಕಣ್ಣು ವಿವಿ ಸಾಗರದ ಮೇಲಿದೆ":
"ಜಿಲ್ಲೆಗೆ ಬರುವ ಎಲ್ಲಾ ಶಾಸಕರು ವಾಣಿವಿಲಾಸ ಸಾಗರದ ನೀರನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಮರುಪೂರಣ ಮಾಡುವ ಬಗ್ಗೆ ಯೋಚಿಸುತ್ತಿಲ್ಲ. ವಿವಿ ಸಾಗರ ಉಳಿಯಬೇಕಾದರೆ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಇಲ್ಲಿಗೆ ಹರಿಸಬೇಕು. ಈ ಹಿಂದೆ ಧರ್ಮಪುರ ಭಾಗದ ಕೆರೆಗಳಿಗೆ ತುಮಕೂರು ಬ್ರಾಂಚ್ ಕ್ಯಾನಲ್ನಿಂದ ಶಿರಾ ಮೂಲಕ ಹರಿಸಬೇಕಿದ್ದ ನೀರನ್ನು ಹಾಗೂ ಚಳ್ಳಕೆರೆ ಕೆರೆಗಳಿಗೆ ನಿಗದಿಯಾಗಿದ್ದ ನೀರನ್ನು ವಿವಿ ಸಾಗರಕ್ಕೆ ಮರುಹೊಂದಾಣಿಕೆ ಮಾಡಬೇಕು. ಇಲ್ಲದಿದ್ದರೆ ಅಚ್ಚುಕಟ್ಟು ಪ್ರದೇಶದ ರೈತರ ಸ್ಥಿತಿ ಅತ್ಯಂತ ಭೀಕರವಾಗಲಿದೆ," ಎಂದು ರಮೇಶ್ ಎಚ್ಚರಿಸಿದರು.
ನೈಜ ಹೋರಾಟಗಾರರ ಕಡೆಗಣನೆಗೆ ಆಕ್ರೋಶ:
ಸಮಿತಿಯ ಕಾರ್ಯಾಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, "ಮುಖ್ಯಮಂತ್ರಿಗಳ ಬಳಿಗೆ ತಾಲೂಕಿನ ರೈತರ ನಿಯೋಗ ಕೊಂಡೊಯ್ಯುವಾಗ ರಾಜಕಾರಣಿಗಳು ನೈಜ ನೀರಾವರಿ ಹೋರಾಟಗಾರರನ್ನು ಕಡೆಗಣಿಸಿದ್ದಾರೆ. ಕೇವಲ ತಮ್ಮ ಪಕ್ಷದ ಬೆಂಬಲಿಗರನ್ನು ಕರೆದೊಯ್ದಿದ್ದರಿಂದ ಜಲಾಶಯದ ವಾಸ್ತವ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಮ್ಮ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ," ಎಂದು ಖಂಡಿಸಿದರು.
ಮುಂದಿನ ನಡೆ: ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ನೈಜ ಹೋರಾಟಗಾರರ ಜೊತೆಗೂಡಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಸಾರ್ವಜನಿಕರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕುಡಿಯುವ ನೀರಿಗೂ ತತ್ವಾರ ಪಡಬೇಕಾಗುತ್ತದೆ ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಹಿರಿಯರಾದ ಆನಂದ ಶೆಟ್ಟರು, ಎಂ. ರಾಜೇಂದ್ರ, ಎಂ.ಟಿ. ಸುರೇಶ್ (ವಕೀಲರು), ಆರ್.ಕೆ. ಗೌಡ್ರು, ಮಂಜುನಾಥ್ ಮಾಳಿಗೆ, ಪಿಟ್ಲಾಲಿ ಶ್ರೀನಿವಾಸ್, ಪ್ರೊಫೆಸರ್ ಮೈಸೂರ್ ಶಿವಣ್ಣ, ಸಿಡ್ಲೈನ ಕೋಟೆ ಮಲ್ಲಿಕಾರ್ಜುನಪ್ಪ, ದಸ್ತಗಿರ್ ಸಾಬ್, ಜಿ.ಬಿ. ರಾಜು, ರಾಮಚಂದ್ರ ಕಸವನಹಳ್ಳಿ, ಆನ್ಸರ್ ಅಲಿ, ಮಮತಾ ಕೃಷ್ಣಮೂರ್ತಿ, ಎಂ.ಎಂ.ಎಂ. ಮಣಿ, ಜಿ.ಓ. ನಾಗರಾಜ್, ಶಿವಣ್ಣ ಬೀರೇನಳ್ಳಿ, ಪ್ರಜ್ವಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.



