ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಕರೇನಳ್ಳಿಯಲ್ಲಿರುವ ಅನುದಾನಿತ ಮಂಗಳಾ ಶಿಕ್ಷಣ ಸಂಸ್ಥೆಯವರು ಇಂಗ್ಲಿಷ್ ಮಾಧ್ಯಮ ಶಾಲೆ ನಡೆಸಲು ಮುಂದಾಗಿದ್ದು ಈ ಬಗ್ಗೆ ನಮ್ಮ ಯಾವುದೇ ತಕರಾರಿಲ್ಲ, ಆದರೆ ದಾನಿಗಳಿಂದ ಸರ್ಕಾರಿ ಶಾಲೆ ಹೆಸರಿನಲ್ಲಿ ಪಡೆದಿರುವ ಭೂಮಿ, ಸರ್ಕಾರ ಮತ್ತು ವಿವಿಧ ಸಂಸ್ಥೆಗಳಿಂದ ಪಡೆದಿರುವ ಎಲ್ಲಾ ಅನುದಾನಗಳನ್ನು ಹಿಂದಿರುಗಿಸಿ ತಮ್ಮ ಸ್ವಂತ ಬಂಡವಾಳ ಹೂಡಿಕೆ ಮಾಡಿ ಭೂಮಿಯನ್ನು ಖರೀದಿಸಿ ಕಟ್ಟಡ ನಿರ್ಮಿಸಿಕೊಂಡು ಶಾಲೆ ನಡೆಸಲಿ ಅದನ್ನು ಬಿಟ್ಟು ಚೆನ್ನಾಗಿ ನಡೆಯುತ್ತಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹುನ್ನಾರ ಮಾಡಿದರೆ ನಮ್ಮ ಕನ್ನಡ ಪಕ್ಷದ ಹೋರಾಟವನ್ನು ಎದುರಿಸಬೇಕೆಂದು ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ ಪಿ ಆಂಜನೇಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರೇನಳ್ಳಿಯಲ್ಲಿರುವ ಅನುದಾನಿತ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಹುನ್ನಾರ ಮಾಡುತ್ತಿರುವ, ಮಂಗಳಾ ಶಿಕ್ಷಣ ಸಮಿತಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ ಎಂದರು.
ಕರೇನಳ್ಳಿಯ ಅನುದಾನಿತ ಮಂಗಳ ಶಾಲೆಯಲ್ಲಿ ಸುಮಾರು 273 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಈ ವಿಧ್ಯಾರ್ಥಿ ಗಳೆಲ್ಲರೂ ಕರೇನಳ್ಳಿ, ದರ್ಗಾಜೋಗಿಹಳ್ಳಿ , ಇಸ್ಲಾಂಪುರ ಭಾಗದವರಾಗಿದ್ದಾರೆ. ಈ ಪ್ರದೇಶಗಳು ಅತ್ಯಂತ ಬಡವರು, ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು, ಶ್ರಮಿಕ ವರ್ಗದವರು ವಾಸಮಾಡುವ ಪ್ರದೇಶಗಳಾಗಿರುತ್ತವೆ. ಈ ಶಾಲೆಯಲ್ಲಿ ಸರ್ಕಾರದಿಂದ ನೇಮಕಗೊಂಡ 5 ಜನ ಶಿಕ್ಷಕರು 3 ಜನ ಬಿಸಿ ಊಟ ತಯಾರಕರು ಆಡಳಿತ ಮಂಡಳಿಯವರು ನೇಮಿಸಿ ಕೊಂಡಿರುವ 4 ಜನ ಶಿಕ್ಷಕರು ಸೇರಿದಂತೆ ಒಟ್ಟು 9 ಜನ ಶಿಕ್ಷಕರಿದ್ದು ಈ ಶಾಲೆಯನ್ನು ಮುಚ್ಚಲು ಇಲ್ಲಿನ ಆಡಳಿತ ಮಂಡಳಿಯವರು ಹುನ್ನಾರ ನಡೆಸಿದ್ದು ಈ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದರು.
ಹಕ್ಕೊತ್ತಾಯಗಳು?
ಕರೇನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಉಳಿಯಬೇಕು.
*ಕಾನೂನು ಬಾಹಿರವಾಗಿ ಶಿಕ್ಷಕರ ವರ್ಗಾವಣೆಗೆ ಪತ್ರ ಕೊಟ್ಟು ವಿಧ್ಯಾರ್ಥಿ ಪೋಷಕರಿಗೆ ವರ್ಗಾವಣೆ ಪತ್ರ (ಟಿ.ಸಿ) ನೀಡಿ ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹುನ್ನಾರ ಮಾಡಿರುವ ಮಂಗಳಾ ಶಿಕ್ಷಣ ಸಮಿತಿಯನ್ನು ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಮತ್ತು ವಿವಿಧ ಸಂಸ್ಥೆಗಳಿಂದ ಊರಿನ ಅನೇಕ ದಾನಿಗಳಿಂದ ನೆರವು ಪಡೆದು ಈಗ ನಿಮ್ಮ ಅನುದಾನ ನಮಗೆ ಬೇಡ ನಾವು ಅನುದಾನ ರಹಿತ ಶಾಲೆ ಮಾಡುತ್ತೇವೆ ಎಂದು ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 5 ಜನ ಸರ್ಕಾರಿ ಶಿಕ್ಷಕರನ್ನು ವರ್ಗಾವಣೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವುದಲ್ಲದೆ ವಿಧ್ಯಾರ್ಥಿ ಪೋಷಕರಿಗೆ ಇನ್ನೂ ಮುಂದೆ ನಾವು 2026-27 ಸಾಲಿನಿಂದ ಕನ್ನಡ ಮಾಧ್ಯಮ ಶಾಲೆ (ಕನ್ನಡ ಮೀಡಿಯಂ) ಮಾಡುವುದಿಲ್ಲ ಇಂಗ್ಲಿಷ್ ಮೀಡಿಯಂ ಮಾಡುತ್ತೇವೆ.
ನಿಮ್ಮ ನಿಮ್ಮ ಮಕ್ಕಳನ್ನು ನಿಮಗೆ ಬೇಕಾದ ಶಾಲೆಗಳಿಗೆ ಸೇರಿಸಿ ಎಂದು ವರ್ಗಾವಣೆ ಪತ್ರ (ಟಿ.ಸಿ) ಬೆರೆದು ಕೊಡಲು ಮುಂದಾಗಿರುವುದು ನೋಡಿದರೆ, ಇದರಲ್ಲಿ ಲೂಟಿ ಮಾಡುವ ಸಂಚು ನಡೆಸಿದ್ದಾರೆ. ಸುಮಾರು 273 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆ ಚೆಲ್ಲಾಟ ವಾಡುತ್ತಿರುವ ಮಂಗಳಾ ಶಿಕ್ಷಣ ಸಮಿತಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ಆಡಳಿತ ಮಂಡಳಿಯನ್ನು ರದ್ದು ಗೊಳಿಸಬೇಕೆಂದು ತಾಲ್ಲೂಕು ಕನ್ನಡ ಪಕ್ಷ ಆಗ್ರಹಿಸುತ್ತದೆ ಎಂದರು.
ತಾಲ್ಲೂಕು ಅಧ್ಯಕ್ಷ ವೆಂಕಟೇಶ್ , ಜಿಲ್ಲಾ ರೈತ ಸಂಘದ ಮುಖಂಡ ಮುತ್ತೇಗೌಡ,ನರಸಿಂಹಮೂರ್ತಿ,ಆರ್ ರಂಗನಾಥ್, ಡಿ ವೆಂಕಟೇಶ್,ಎಂ ಜಿ ಬೋರೇಗೌಡ, ವಿ ಪರಮೇಶ್, ಜಿ ಸುರೇಶ್, ಕೆ ಎನ್ ಕುಮಾರ್, ನರಸಿಂಹಮೂರ್ತಿ, ಮಂಜುನಾಥ್, ಶ್ರೀನಿವಾಸ್, ರಾಜಣ್ಣ, ರಾಮಚಂದ್ರ,ಮಹೇಶ್, ಬಾಬಾ ನಾಗರಾಜು, ಜೀವನ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಪಕ್ಷದ ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.



