ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಸಾಧನಾ ಸಮಾವೇಶ’ದ ವಿರುದ್ಧ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಇದು ಸಾಧನಾ ಸಮಾವೇಶವಲ್ಲ, ಭ್ರಷ್ಟಾಚಾರವನ್ನು ಸಂಭ್ರಮಿಸುವ ಸಮಾವೇಶ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಿ.ಟಿ. ರವಿ ಅವರು ಸರ್ಕಾರದ ವಿರುದ್ಧ ಮಾಡಿರುವ ಪ್ರಮುಖ ಆರೋಪಗಳು ಹೀಗಿವೆ.
ಆರ್ಥಿಕ ದಿವಾಳಿತನ ಮತ್ತು ಸಾಲದ ಹೊರೆ-
"ರಾಜ್ಯದ ಬೊಕ್ಕಸವನ್ನು ಸಂಪೂರ್ಣ ಖಾಲಿ ಮಾಡಿ, ಸಾಲದ ಹೊರೆಯನ್ನು ರಾಜ್ಯದ ಎಲ್ಲ ನಾಗರಿಕರ ಮೇಲೆ ಹೊರಿಸಿದ್ದು ಈ ಸರ್ಕಾರದ ಸಾಧನೆಯೇ? ದಿನದಿಂದ ದಿನಕ್ಕೆ ರಾಜ್ಯದ ಸಾಲ ಹೆಚ್ಚುತ್ತಿದ್ದು, ಅಭಿವೃದ್ಧಿಗೆ ಒಂದು ರೂಪಾಯಿ ಬಿಡುಗಡೆಯಾಗದ ಸ್ಥಿತಿಗೆ ತಳ್ಳಿದ್ದನ್ನೂ ಸಂಭ್ರಮಿಸುತ್ತೀರೇ?" ಎಂದು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಸಾಲು ಸಾಲು ಹಗರಣಗಳ ಆರೋಪ-
ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳೇ ಸಾಧನೆಯಾಗಿವೆ ಎಂದಿರುವ ಸಿ.ಟಿ. ರವಿ, ಮುಡಾ ಹಗರಣ, ಕೆಪಿಎಸ್ಸಿ ಹಾಗೂ ಕೆಐಎಡಿಬಿ ಹಗರಣಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಾಗಿದ್ದ ವಾಲ್ಮೀಕಿ ನಿಗಮದ ಬ್ಯಾಂಕ್ಖಾತೆಯನ್ನು ಲೂಟಿ ಹೊಡೆದು, ಹಣ ದುರ್ಬಳಕೆ ಮಾಡಿದ್ದೇ ಸರ್ಕಾರದ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.
ಮೀಸಲಾತಿ ಗೊಂದಲ ಮತ್ತು ರೈತರ ಕಡೆಗಣನೆ-
ಒಳ ಮೀಸಲಾತಿ: ಒಳ ಮೀಸಲಾತಿ ಹೆಸರಿನಲ್ಲಿ ಸಮುದಾಯಗಳು ಪರಸ್ಪರ ಜಗಳಾಡುವಂತೆ ಮಾಡಲಾಗಿದೆ. ಬಿಜೆಪಿ ಸರ್ಕಾರ ನೀಡಿದ್ದ ಹೆಚ್ಚುವರಿ ಮೀಸಲಾತಿಯನ್ನು ಕಾಂಗ್ರೆಸ್ ಕಡಿತಗೊಳಿಸಿದೆ.
ಅನ್ನದಾತರ ಬೀದಿಪಾಲ: ಕಬ್ಬು ಮತ್ತು ಭತ್ತ ಬೆಳೆಗಾರರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯನ್ನೂ ಪಾವತಿಸದೆ, ತಿಂಗಳುಗಳ ಕಾಲ ಅನ್ನದಾತರನ್ನು ಬೀದಿಯಲ್ಲಿ ನಿಲ್ಲಿಸಲಾಗಿದೆ.
'ಉಡ್ತಾ ಕರ್ನಾಟಕ' ಮತ್ತು ಕಾನೂನು ಸುವ್ಯವಸ್ಥೆ ವೈಫಲ್ಯ-
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರಿದ್ದು, ಯುವ ಜನರು ಹಾದಿ ತಪ್ಪುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕರ್ನಾಟಕವು 'ಉಡ್ತಾ ಪಂಜಾಬ್' ಮಾದರಿಯಲ್ಲಿ 'ಉಡ್ತಾ ಕರ್ನಾಟಕ' ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ವಲಯದ ದುಸ್ಥಿತಿ-
ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಕೆಳಗಿನ ಘಟನೆಗಳನ್ನು ಪಟ್ಟಿ ಮಾಡಿದ್ದಾರೆ.
ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಸರಿಪಡಿಸಲಾಗದೆ 7 ಅಮಾಯಕರ ಪ್ರಾಣ ಕಸಿದುಕೊಳ್ಳಲಾಗಿದೆ. ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಮಾಯಕ ಹಸುಳೆಗಳು ಸಾವಿಗೀಡಾಗಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ ಔಷಧಗಳಿಲ್ಲ, ಡಯಾಲಿಸಿಸ್ ಸೇವೆಗಳಿಲ್ಲದೆ ಜನರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ.
"ಗುತ್ತಿಗೆದಾರರಿಂದ 60% ಕಮಿಷನ್ ಲೂಟಿ"-
ಹಿಂದಿನ ಕಮಿಷನ್ ಆರೋಪಗಳ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಿರುವ ಸಿ.ಟಿ. ರವಿ, "ಗುತ್ತಿಗೆದಾರರಿಂದ ಬರೋಬ್ಬರಿ 60% ಕಮಿಷನ್ ಹೊಡೆದು, ಅವರು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಳ್ಳಿದ ಭ್ರಷ್ಟ ಸರ್ಕಾರವಿದು" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಠೇವಣಿ ಕಳೆದುಕೊಳ್ಳುವ ಭೀತಿ:
ರಾಜ್ಯದ ಆರ್ಥಿಕತೆಯನ್ನು ಹಳ್ಳ ಹಿಡಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಕೊಂಚವಾದರೂ ನಾಚಿಕೆ ಇದ್ದರೆ, ತಕ್ಷಣವೇ ಈ 'ವೈಫಲ್ಯದ ಸಮಾವೇಶ'ವನ್ನು ರದ್ದುಗೊಳಿಸಬೇಕು. ಜನರನ್ನು ಇನ್ನು ಮುಂದೆ ಮೋಸಗೊಳಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬೀಳುವ ಒಂದೊಂದು ಮತವೂ ಭ್ರಷ್ಟ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಳ್ಳುವಂತೆ ಮಾಡಲಿದೆ ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.


