ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮದುವೆಗೆ ನಿರಾಕರಿಸಿದಳೆಂಬ ಕಾರಣಕ್ಕೆ ಅತಿಥಿ ಉಪನ್ಯಾಸಕಿಯನ್ನು ಕೊಲೆ ಮಾಡಿ, ಆರೋಪಿಯೂ ಆತ್ಮಹತ್ಯೆ ಮಾಡಿ ಕೊಂಡಿರುವ ಧಾರುಣ ಘಟನೆ ತಾಲ್ಲೂಕಿನ ಜಿಂಕೆಬಚ್ಚಹಳ್ಳಿಯಲ್ಲಿ ನಡೆದಿದೆ.
ಏನಿದು ಘಟನೆ? ದೇವನಹಳ್ಳಿಯ ಖಾಸಗಿ ಕಾಲೇಜು ಒಂದರಲ್ಲಿ ಅತಿಥಿ ಉಪನ್ಯಾಸಕಿ ಯಾಗಿದ್ದ ಸರೋಜಾ(40) ಹಾಗೂ ರಾಮಾಂಜಿ (45) ಎಂಬುವವರು ಕಳೆದ ಒಂದು ವರ್ಷದಿಂದ ಪರಿಚಯವಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಶುರುವಾದ ಈ ಸ್ನೇಹ ನಂತರ ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಕೊಲೆಗೆ ಕಾರಣವೇನು? ತನ್ನ ಪತಿಯಿಂದ ದೂರವಾಗಿದ್ದ ಸರೋಜಾಳನ್ನು ಮದುವೆಯಾಗುವಂತೆ ರಾಮಾಂಜಿ ಒತ್ತಾಯಿಸುತ್ತಿದ್ದ. ಆದರೆ ಸರೋಜಾ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೆರಳಿದ ರಾಮಾಂಜಿ, ಆಕೆಯನ್ನು ಲಾಂಗ್ ಡ್ರೈವ್ಗೆಂದು ಕರೆದೊಯ್ದು ಜಿಂಕೆಬಚ್ಚ ಹಳ್ಳಿಬಳಿ ಭೀಕರವಾಗಿ ಹತ್ಯೆಗೈದು ಸಾಕ್ಷ್ಯ ನಾಶಪಡಿಸಲು ಕಾರಿನಲ್ಲಿ ಆಕೆಯ ಶವವಿರಿಸಿ ಕಾರಿಗೆ ಬೆಂಕಿ ಹಚ್ಚಿದ್ದಾನೆ.
ಆರೋಪಿಯೂ ಅಂತ್ಯ: ಕೊಲೆ ಮಾಡಿ ಪರಾರಿಯಾಗಿದ್ದ ರಾಮಾಂಜಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಈ ನಡುವೆ ಆರೋಪಿ ರಾಮಾಂಜಿ ಕೂಡ ದೊಡ್ಡಬಳ್ಳಾಪುರ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕ್ಷಣಿಕ ಆವೇಶ ಮತ್ತು ಅನೈತಿಕ ಸಂಬಂಧಗಳು ಹೇಗೆ ಎರಡು ಜೀವಗಳನ್ನು ಬಲಿ ಪಡೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


