ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸರ್ಕಾರ ಗ್ರೂಪ್ ಎ ಗೆ 5.25, ಗ್ರೂಪ್ ಬಿ ಗೆ 5.25 ಮತ್ತು ಗ್ರೂಪ್ ಸಿ ಗೆ 4.5 ಪ್ರಮಾಣದಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಿರುವುದನ್ನು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದು ಮಾದರ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಬ್ಬರಾಜು ತಿಳಿಸಿದರು.
ಮಾದರ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ 40 ವರ್ಷಗಳ ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ. ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಈ ತೀರ್ಮಾನ ಮಹತ್ವದ್ದಾಗಿದೆ. ಬಸವಣ್ಣವರ ಸಮಾನತೆ ತತ್ವವನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಈ ಹೋರಾಟಕ್ಕೆ ಸಹಕರಿಸಿದ ರಾಜ್ಯ ಪ್ರಮುಖರು ಸಚಿವರು ಆದ ಕೆಎಚ್ ಮುನಿಯಪ್ಪ ರವರಿಗೆ , ಹಾಗೂ ಒಳಬಿಸಿಲಾತಿ ಜಾರಿಗೊಳಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.
ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಮುಖ್ಯಮಂತ್ರಿಗಳ ಬದ್ಧತೆ ಇಂದು ಕಾರ್ಯರೂಪಕ್ಕೆ ಬಂದಿದೆ,” ಒಳ ಮೀಸಲಾತಿ ಜಾರಿ ಪ್ರಕ್ರಿಯೆಯಲ್ಲಿ ಕಾನೂನು ಸಚಿವರು, ಗೃಹ ಸಚಿವರು, ಹಾಗೂ ಮಹಾದೇವಪ್ಪ ಸೇರಿದಂತೆ ಹಲವು ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಚಿತ್ರದುರ್ಗದಲ್ಲಿ ನಡೆದ ಐತಿಹಾಸಿಕ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ನಾಯಕರು ತೆಗೆದುಕೊಂಡ ನಿರ್ಧಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ರಾಜ್ಯ ಮಾದಾರ ಮಹಾ ಸಭಾದ ವಿಶೇಷ ಪ್ರತಿನಿಧಿ ರಾಮಕೃಷ್ಣ ಮಾತನಾಡಿ ರಾಜ್ಯದ 101 ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಮಾದಿಗ ಸಮುದಾಯ ಸ್ವಾಗತಿಸುತ್ತದೆ. ಸುಮಾರು ಮೂವತ್ತೈದು ವರ್ಷಗಳ ಸುದೀರ್ಘ ಹೋರಾಟದಲ್ಲಿ ಸಮುದಾಯದ ಅನೇಕ ಮುಖಂಡರು ತಮ್ಮ ಜೀವನಪರ್ಯಂತ ಹೋರಾಟ ಮಾಡಿ ಮೃತರಾಗಿದ್ದಾರೆ. ಹಲವಾರು ಮುಖಂಡರು ಕೇಸುಗಳನ್ನು ಹಾಕಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಹೋರಾಟವನ್ನು ಮಾಡಿದ್ದಾರೆ. ಅವರೆಲ್ಲರ ಪ್ರತಿಫಲ ಇಂದು ಒಳ ಮೀಸಲಾತಿ ಯಲ್ಲಿ ಮಾದಿಗ ಸಮುದಾಯಕ್ಕೆ ಬಾಗಷಃ ಸಿಕ್ಕ ಜಯ. ಇದನ್ನು ಅವರಿಗೆ ಅರ್ಪಿಸುತ್ತೇವೆ ಎಂದು ಹೇಳಿದರು.
ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ತಳಗವಾರ ನಾಗರಾಜ್ ಮಾತನಾಡಿ ಒಳ ಮೀಸಲಾತಿ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.ಪೂರ್ಣವಾಗಿ ಅಲ್ಲದಿದ್ದರೂ ಬಾಗಷಃ ಸಮಾಜಕ್ಕೆ ನ್ಯಾಯ ಸಿಕ್ಕಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಮಾದರ ಮಹಾಸಭಾ ಸ್ವಾಗತಿಸುತ್ತದೆ ಎಂದರು.
ಈ ವೇಳೆ ಮುಖಂಡರಾದ ಬಿ ಕೆ ಶಿವಪ್ಪ, ನಾಗರಾಜು ಬಚ್ಚಹಳ್ಳಿ, ವೆಂಕಟೇಶ್, ಹನುಮಣ್ಣ, ಟಿ. ಡಿ. ಮುನಿಯಪ್ಪ, ಗಂಗರಾಜು ನಾರಸಿಂಹನಹಳ್ಳಿ, ಕೆ ವಿ ಮುನಿಯಪ್ಪ, ರಾಮ, ನರಸಪ್ಪ, ಮೈಲಾರಪ್ಪ, ಕೆ ನಾರಾಯಣಪ್ಪ, ಹರ್ಷ, ಕಾಂತರಾಜ, ಮುನಿಯಪ್ಪ, ಗಂಗರಾಜು ಮತ್ತಿತ್ತರರು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.


