ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಜನತಾ ದಳ (ಜಾತ್ಯತೀತ) ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. 'ಕುಣಿಯಲಾರದವನಿಗೆ ನೆಲ ಡೊಂಕು' ಎಂಬ ಗಾದೆ ಮಾತಿನ ಮೂಲಕ ಡಿಕೆಶಿ ಅವರ ಆಡಳಿತ ವೈಫಲ್ಯವನ್ನು ಜೆಡಿಎಸ್ ಲೇವಡಿ ಮಾಡಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸರಣಿ ಆಪಾದನೆಗಳನ್ನು ಮಾಡಿರುವ ಜೆಡಿಎಸ್, "ಕಿಸಿತೀನಿ ಕಿಸಿತೀನಿ ಅಂತ ಬರೀ ಬಾಯಿ ಹರಿದುಕೊಳ್ಳುತ್ತಿರುವ ಡಿಸಿಎಂ ಅವರೇ, ನಿಮ್ಮ ಯೋಗ್ಯತೆಗೆ ಮೂರು ವರ್ಷಗಳಾದರೂ ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ನಗರದ ಕಸದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜೆಡಿಎಸ್ ಮಾಡಿರುವ ಪ್ರಮುಖ ಆರೋಪಗಳು:
ಶೂನ್ಯ ಸಾಧನೆ: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಿಮ್ಮ ಸಾಧನೆ ಸಂಪೂರ್ಣ ಶೂನ್ಯ (000). ಸಿಲಿಕಾನ್ ಸಿಟಿ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದೀರಿ.
ಮಳೆ ಅವಾಂತರ: ಸಣ್ಣ ಮಳೆ ಬಂದರೂ ಬೆಂಗಳೂರು ಮುಳುಗುತ್ತಿದೆ. ಆದರೆ ನಗರವನ್ನು ರಕ್ಷಿಸಬೇಕಾದ ನೀವು ಮಾತ್ರ ಕೈಚೆಲ್ಲಿ ಕುಳಿತಿದ್ದೀರಿ.
ಹತಾಶೆಯ ವರ್ತನೆ: ಮುಖ್ಯಮಂತ್ರಿ ಕುರ್ಚಿ ಸಿಗದಿರುವ ಹತಾಶೆಯಿಂದಾಗಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದೀರಿ.
ಹೆಚ್ಡಿಕೆ ಪರ ಬ್ಯಾಟಿಂಗ್: ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ನಿಮ್ಮಂತಹ 'ಕೈ'ಲಾಗದ ವ್ಯಕ್ತಿಗಳು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡುತ್ತಿರುವುದು ನಿಮ್ಮಲ್ಲಿರುವ ಹತಾಶೆಯ ಪರಮಾವಧಿಯನ್ನು ತೋರಿಸುತ್ತಿದೆ ಎಂದು ಜೆಡಿಎಸ್ ನೇರ ಹರಿಹಾಯ್ದಿದೆ.
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚದ, ಕಸದ ಸಮಸ್ಯೆ ಬಗೆಹರಿಸದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಸಿಎಂ ಸ್ಥಾನ ಸಿಗದ ಹತಾಶೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ.


