ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೇಂದ್ರ ಸರ್ಕಾರದ ಜನವಿರೋಧಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಪ್ರತಿಭಟನೆ ಕನ್ನಡ ಪಕ್ಷ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಸರ್ಕಾರಿ ಸ್ವಾಮ್ಯದ ಮಾರಾಟ ಕಂಪನಿಗಳು ಕಳೆದ ತಿಂಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿವೆ. ಕೇವಲ 11 ದಿವಸಗಳ ಅಂತರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವು ಸರಿ ಸುಮಾರು ರೂ.7-50 ರಷ್ಟು ಏರಿಕೆಯಾಗಿದ್ದು ಇದರಿಂದ ಜನಸಾಮಾನ್ಯರ ಜೋಬಿಗೆ ಕತ್ತರಿ ಬಿದ್ದಂತಾಗಿದೆ.
ರಾತ್ರೋ ರಾತ್ರಿ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲೋತ್ಪನ್ನಗಳ ಬೆಲೆ ಶೇಕಡ 20ರಷ್ಟು ಕುಸಿದಿದ್ದರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದಿರುವುದು ಕೇಂದ್ರ ಸರ್ಕಾರದ ಜನ ವಿರೋಧಿ ನಡೆಗೆ ಸಾಕ್ಷಿಯಾಗಿದೆ.
ಕೇಂದ್ರ ಸರ್ಕಾರ ಪದೆ ಪದೆ ಬೆಲೆ ಏರಿಕೆ ಮಾಡುತ್ತಿರುವುದರಿಂದ ಬಡವರು, ದೀನದಲಿತರು, ಅಲ್ಪಸಂಖ್ಯಾತರು, ಕೂಲಿಕಾರ್ಮಿಕರು, ರೈತರು, ನೇಕಾರರು, ಶ್ರಮಿಕರು ಮತ್ತು ಮಧ್ಯಮ ವರ್ಗದ ಜನರು ಜೀವನ ನಡೆಸಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ತೈಲ ಬೆಲೆ ನಾಲ್ಕು ಬಾರಿ ಏರಿಕೆಯಾಗಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಮನ್ ಮೋಹನ್ ಸಿಂಗ್ ಸರ್ಕಾರ ಒಂದೆರಡು ರೂಗಳ ಬೆಲೆ ಏರಿಕೆಯನ್ನು ಮೋದಿ ಅತ್ಯುಗ್ರವಾಗಿ ಖಂಡಿಸಿದ್ದರು. ಜೊತೆಗೆ ಬಿಜೆಪಿ ಪಕ್ಷವಂತು ದೇಶಡೆಲ್ಲೆಡೆ ಪ್ರತಿಭಟನೆ ನಡೆಸಿತ್ತು.
ಆದರೆ ಪ್ರಧಾನಿ ಆದ ನಂತರ ಮೋದಿ ಬೆಲೆ ಏರಿಕೆಯೇ ದೇಶದ ಅಭಿವೃದ್ಧಿ ಎಂದು ತಿಳಿದಿದ್ದಾರೆ. ಅವರಿಗೆ ಬಡವರ್ಗದ ಸಂಕಷ್ಟಗಳ ಬಗ್ಗೆ ಅರಿವಿಲ್ಲ. ಒಂದರ್ಥದಲ್ಲಿ ಮೋದಿಯವರು ತಾನು ಬಿಜೆಪಿ ಪಕ್ಷದ ಪ್ರಧಾನಿ ಎಂದು ತಿಳಿದುಕೊಂಡಿದ್ದಾರೆ. ಅವರಿಗೆ ತಾನು ಭಾರತ ದೇಶದ ಪ್ರಧಾನಿ ಎಂಬುದನ್ನು ಮರೆತಿದ್ದಾರೆ. ಜೊತೆಗೆ ಕಾರ್ಪೊರೇಟ್ ಕಂಪನಿಗಳ ಪಾಲುದಾರರಂತೆ ವರ್ತಿಸುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಹೀಗಾಗಿ ಬಡವರ ಸ್ಥಿತಿ ಅದೋಗತಿಯಾಗಿದೆ.ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಏರಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಬೇಕೆಂದು ಕನ್ನಡ ಪಕ್ಷ ಒತ್ತಾಯಿಸುತ್ತದೆ ಎಂದರು.
ಕನ್ನಡಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಪಿ. ಆಂಜನೇಯ ಮಾತನಾಡಿ ಹನ್ನೆರಡು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿ ಸರ್ಕಾರ ಜನ ಸಾಮಾನ್ಯರ ವಿರೋಧಿಯಾಗಿದೆ. ಇತ್ತೀಚೆಗೆ ತೈಲೋತ್ಪನ್ನಗಳ ದರ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಾಗಿದ್ದರೂ ದೇಶದಲ್ಲಿ ಮಾತ್ರ ಏರಿಕೆಯಾಗುತ್ತಲಿದೆ. ಬೆಲೆ ಏರಿಕೆಯನ್ನು ತಹಬಂದಿಗೆ ತಂದು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಪ್ರಧಾನಿ ಮೋದಿ ವಿಪಲರಾಗಿದ್ದಾರೆ. ಇದನ್ನು ಕಂಡಿಸಬೇಕಿದ್ದ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಅದರಲ್ಲೂ ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಲೆ ಏರಿಕೆಯನ್ನು ಸಮರ್ಥಿಸಿ ಜನವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಕಂಡನೀಯ.
ಕೇಂದ್ರದ ತೈಲಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಂತಾಗಿದೆ. ಇದನ್ನು ಖಂಡಿಸಿ ಜನಸಾಮಾನ್ಯರ ನೆರವಿಗೆ ಬರಬೇಕಿದ್ದ ರಾಜಕೀಯ ಪಕ್ಷಗಳು ತಟಷ್ಟ ನೀತಿ ಅನುಸರಿಸುತ್ತಿವೆ. ಅಚ್ಛೇ ದಿನ್ ಎಂದು ಮನ್ ಕಿ ಬಾತ್ ನಲ್ಲಿ ಅಬ್ಬರಿಸುವ ಪ್ರಧಾನಿ ಮೋದಿಈ ಕೂಡಲೇ ರಾಜೀನಾಮೆ ನೀಡಬೇಕು. ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಬರೀ ಕಾರ್ಪೊರೇಟ್ ಸಮುದಾಯದ ರಕ್ಷಣೆಗೆ ಸೀಮಿತವಾಗಿದ್ದಾರೆ. ಅವರಿಗೆ ಮಧ್ಯಮ ಹಾಗೂ ಬಡ ವರ್ಗದ ಜನರ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ಅವರು ಭಾರತದ ಪ್ರಧಾನಿಯಾಗಿ ಮುಂದುವರೆಯಲು ನೈತಿಕತೆ ಇಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಬಗ್ಗೆ ಗಮನ ಹರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ಪಕ್ಷ ಎಲ್ಲಾ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ತೀವ್ರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ತಾಲೂಕು ಕನ್ನಡ ಅಧ್ಯಕ್ಷ ವೆಂಕಟೇಶ್, ಜಿಲ್ಲಾಧ್ಯಕ್ಷ ಮುನಿ ಪಾಪಯ್ಯ,ಪಕ್ಷದ ಮುಖಂಡರಾದ ಆರ್. ರಂಗನಾಥ್ , ಎಂ ಜಿ ಬೋರೇಗೌಡ, ವಿ ಪರಮೇಶ್, ಜಿ ಸುರೇಶ್, ಕೆ ಎನ್ ಕುಮಾರ್, ನರಸಿಂಹಮೂರ್ತಿ, ಮಂಜುನಾಥ್, ಶ್ರೀನಿವಾಸ್,ರಾಜಣ್ಣ,ರಾಮಚಂದ್ರ, ಮಹೇಶ್, ಬಾಬಾ, ಶಿವರಾಜ್ ಸೇನಾ ಸಮಿತಿಯಮುಖಂಡ ರಮೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಹನುಮೇಗೌಡ, ಶಿರವಾರ ರವಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.



