ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಜಧಾನಿ ಬೆಂಗಳೂರಿನ ಮಹಾನಗರ ಪಾಲಿಕೆ ಚುನಾವಣೆಗಾಗಿ ಕಾಯುತ್ತಿದ್ದ ಜನರಿಗೆ ಮತ್ತಷ್ಟು ದಿನಗಳ ಕಾಲ ಕಾಯುವಿಕೆ ಅನಿವಾರ್ಯವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ. ಈ ಮೂಲಕ ಡಿಸೆಂಬರ್ 31, 2026ರ ಒಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೊಸ ಗಡುವು ಲಭಿಸಿದೆ.
ಆಗಸ್ಟ್ 31ರ ಗಡುವು ವಿಸ್ತರಣೆ:
ಈ ಹಿಂದೆ ಜಿಬಿಎ ಚುನಾವಣಾ ಪ್ರಕ್ರಿಯೆಯನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ, ರಾಜ್ಯದಲ್ಲಿ ಪ್ರಸ್ತುತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಇಡೀ ಆಡಳಿತ ಯಂತ್ರ ಮತ್ತು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿರುವುದರಿಂದ ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಸುವುದು ತಾಂತ್ರಿಕವಾಗಿ ಮತ್ತು ಪ್ರಾಯೋಗಿಕವಾಗಿ ಅಸಾಧ್ಯ ಎಂದು ರಾಜ್ಯ ಸರ್ಕಾರ ಹಾಗೂ ಜಿಬಿಎ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟಿದ್ದವು.
ಸುಪ್ರೀಂ ಕೋರ್ಟ್ ಆದೇಶ:
ರಾಜ್ಯ ಸರ್ಕಾರದ ವಾದ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯ ಸವಾಲುಗಳನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಚುನಾವಣಾ ಗಡುವನ್ನು ನಾಲ್ಕು ತಿಂಗಳು ಮುಂದೂಡಿದೆ. ಅದರಂತೆ ಡಿಸೆಂಬರ್ 31, 2026ರೊಳಗೆ ಚುನಾವಣೆ ನಡೆಸಿ ಮುಗಿಸುವಂತೆ ಹೊಸ ಆದೇಶ ನೀಡಿದೆ.
5 ಪಾಲಿಕೆಗಳು, 369 ವಾರ್ಡ್ಗಳು:
ಹಳೆಯ ಬಿಬಿಎಂಪಿ ರಚನೆಯನ್ನು ಬದಲಿಸಿ ಹೊಸದಾಗಿ ರೂಪಿಸಲಾಗಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ಅಡಿಯಲ್ಲಿ ಒಟ್ಟು 5 ಮಹಾನಗರ ಪಾಲಿಕೆಗಳು ಬರಲಿವೆ. ಇವುಗಳ ವ್ಯಾಪ್ತಿಯಲ್ಲಿ ಬರುವ 369 ವಾರ್ಡ್ಗಳಿಗೆ ಮೊದಲ ಬಾರಿಗೆ ಈ ಹೊಸ ವ್ಯವಸ್ಥೆಯಡಿ ಚುನಾವಣೆ ನಡೆಯಲಿದ್ದು, ಸದ್ಯಕ್ಕಂತೂ ರಾಜಧಾನಿಯಲ್ಲಿ ಚುನಾವಣಾ ಸದ್ದು ತಣ್ಣಗಾಗಿದ್ದು, ವರ್ಷಾಂತ್ಯಕ್ಕೆ ಮತದಾನ ಪ್ರಕ್ರಿಯೆ ನಡೆಯುವ ಸಾಧ್ಯತೆ ದಟ್ಟವಾಗಿದೆ.



