ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಜಾರಿಗೆ ತಂದಿರುವ ಹೊಸ ‘ಘನತ್ಯಾಜ್ಯ ನಿರ್ವಹಣಾ ನಿಯಮ 2026’ರ ಅನ್ವಯ, ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಂಗಡನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ನಗರಸಭೆ ಪೌರಾಯುಕ್ತ ಎ.ವಾಸೀಂ ಅವರ ಸೂಚನೆಯ ಮೇರೆಗೆ ಇತ್ತೀಚೆಗೆ ನಗರದ ವಾರ್ಡ್ ಸಂಖ್ಯೆ 13 ಮತ್ತು 21 ರಲ್ಲಿ ಸಾರ್ವಜನಿಕರು, ವ್ಯಾಪಾರೋದ್ಯಮಿಗಳು ಹಾಗೂ ಇತರೆ ತ್ಯಾಜ್ಯ ಉತ್ಪಾದಕರಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾರ್ವಜನಿಕರಿಂದಲೇ ಪ್ರಾಯೋಗಿಕವಾಗಿ ತ್ಯಾಜ್ಯವನ್ನು ವಿಂಗಡಿಸಿ ಹಾಕಿಸುವ ಮೂಲಕ ಕಸ ನಿರ್ವಹಣೆಯ ಬಗ್ಗೆ ಮುನ್ನೆಚ್ಚರಿಕೆ ಹಾಗೂ ತಿಳುವಳಿಕೆ ನೀಡಲಾಯಿತು.
ಬಣ್ಣದ ಬುಟ್ಟಿಗಳು: ಕಸ ವಿಂಗಡಣೆಯ ಸಂಪೂರ್ಣ ವಿವರ
ಹೊಸ ನಿಯಮಾವಳಿಗಳ ಪ್ರಕಾರ ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯವನ್ನು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ವಾಹನಕ್ಕೆ ನೀಡಬೇಕಾಗುತ್ತದೆ. ಅದರ ವಿವರ ಇಲ್ಲಿದೆ.
ಬಕೆಟ್ ಬಣ್ಣ ತ್ಯಾಜ್ಯದ ಪ್ರಕಾರ ಒಳಗೊಳ್ಳುವ ವಸ್ತುಗಳು
01. ಹಸಿರು ಬಕೆಟ್ ಹಸಿ ತ್ಯಾಜ್ಯ ಅಡುಗೆಮನೆ ತ್ಯಾಜ್ಯ, ಆಹಾರ, ತರಕಾರಿ, ಮಾಂಸ, ಹಣ್ಣು, ಹೂವು ಹಾಗೂ ಉದ್ಯಾನವನದ ಕೊಳೆಯುವ ವಸ್ತುಗಳು.
02. ನೀಲಿ ಬಕೆಟ್ ಒಣ ತ್ಯಾಜ್ಯ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳು, ಹಳೆಯ ಬಟ್ಟೆ, ಕಬ್ಬಿಣ, ರಬ್ಬರ್ ಮತ್ತು ಮರದ ತ್ಯಾಜ್ಯಗಳು.
03. ಕೆಂಪು ಬಕೆಟ್ ಸ್ಯಾನಿಟರಿ (ನೈರ್ಮಲ್ಯ) ತ್ಯಾಜ್ಯ ಬಳಸಿ ಬಿಸಾಡಿದ ಡೈಪರ್ಗಳು, ಸ್ಯಾನಿಟರಿ ನ್ಯಾಪ್ಕಿನ್ಗಳು, ಕಾಂಡೋಮ್ಸ್ ಇತ್ಯಾದಿ.
ಕಪ್ಪು ಬಕೆಟ್ ವಿಶೇಷ ಕಾಳಜಿ (ಸ್ಪೆಷಲ್ ಕೇರ್) ತ್ಯಾಜ್ಯ ಪೇಂಟ್ ಡಬ್ಬಿಗಳು, ಇ-ವೇಸ್ಟ್ (ಎಲೆಕ್ಟ್ರಾನಿಕ್ ತ್ಯಾಜ್ಯ), ಬಲ್ಬ್/ಟ್ಯೂಬ್ಲೈಟ್, ಅವಧಿ ಮುಗಿದ ಔಷಧಿಗಳು, ಹಳೆಯ ಬ್ಯಾಟರಿಗಳು, ಬಳಸಿದ ಸೂಜಿ/ಸಿರಿಂಜ್ಗಳು ಹಾಗೂ ಬ್ಯಾಂಡೇಜ್ ವಸ್ತುಗಳು.
ನಗರಸಭೆ ಮನವಿ:
"ಸ್ವಚ್ಛ ಮತ್ತು ಸುಂದರ ಹಿರಿಯೂರು ನಗರ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ. ಏಪ್ರಿಲ್ 1, 2026 ರಿಂದ ಜಾರಿಗೆ ಬಂದಿರುವ ಹೊಸ ನಿಯಮದಂತೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ನಗರಸಭೆಯ ಸ್ವಚ್ಛತಾ ವಾಹನಗಳಿಗೆ ನೀಡಬೇಕು. ಈ ಮೂಲಕ ನಗರಸಭೆಯೊಂದಿಗೆ ಕೈಜೋಡಿಸಿ ಸಹಕರಿಸಬೇಕು."
ಎ.ವಾಸೀಂ, ಪೌರಾಯುಕ್ತರು, ನಗರಸಭೆ ಹಿರಿಯೂರು.



