ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.50 ರಷ್ಟು ಮಳೆ ಕೊರತೆಯಾಗಿದ್ದು, ರಾಗಿ ಹಾಗೂ ಸಾವೆ ಬೆಳೆಯುವ ರೈತರು ಸಂಕಷ್ಟದಲ್ಲಿ ಇದ್ದಾರೆ. ಇದರೊಂದಿಗೆ ರೋಗಬಾದೆ ತುತ್ತಾಗಿ ನಷ್ಟಕ್ಕೆ ಒಳಗಾದ ತೆಂಗು ಬೆಳೆ ರೈತರಿಗೆ ನೆರವು ಒದಗಿಸುವಂತೆ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಗಿ ಬೆಳೆಗೆ ಆಗಸ್ಟ್ 14ರ ವರೆಗೆ ಬೆಳೆ ವಿಮೆ ನೊಂದಣಿಗೆ ಅವಕಾಶವಿದೆ. ಹೆಚ್ಚಿನ ರೈತರು ನೊಂದಣಿಗೆ ಕ್ರಮ ಕೈಗೊಳ್ಳಬೇಕು. ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ತೆಂಗು ವಿಸ್ತರಣೆ ಕಾರ್ಯಕ್ರಮದ ಅನುಷ್ಠಾನಕ್ಕೂ ಮೊದಲು, ತೆಂಗು ಬೆಳೆಯಲ್ಲಿ ನಷ್ಟ ಹೊಂದಿದ ರೈತರಿಗೆ ಪರಿಹಾರ ಕೊಡಿಸುವ ಕೆಲಸವಾಗಬೇಕು. ತೆಂಗುಗೆ ವಿಮೆ ಸೌಲಭ್ಯ ಒದಗಿಸಲು ಮಂಡಳಿಗೆ ಶಿಫಾರಸ್ಸು ಮಾಡಬೇಕು. ತಾಲ್ಲೂಕಿನಾದ್ಯಂತ ತೆಂಗು ಬೆಳೆ ನಷ್ಟದ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮಗ್ರ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಚಿವ ಟಿ.ರಘುಮೂರ್ತಿ ನಿರ್ದೇಶಿಸಿದರು.
ಜವರಿಯಿಂದ ಆಗಸ್ಟ್ ವರೆಗೆ ತಾಲ್ಲೂಕಿನಲ್ಲಿ 283.4 ಮಿ.ಮೀ ವಾಡಿಕೆ ಮಳೆಯ ನಿರೀಕ್ಷೆ ಇತ್ತು. ಆದರೆ 174.44 ಮಿ.ಮೀ. ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ 151.2 ಮಿ.ಮೀ. ಮಳೆಯ ನಿರೀಕ್ಷೆ ಇತ್ತು, 76.4 ಮಿ.ಮೀ. ಮಳೆ ಬಿದ್ದದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಶೇ.49 ಹೆಚ್ಚು ಮಳೆಯ ಕೊರತೆಯಾಗಿದೆ. 52,788 ರೈತರು ಇದ್ದು, ಈ ಪೈಕಿ 22,987 ರೈತರು ಫಸಲ್ ವಿಮಾ ಯೋಜನೆಯಡಿ ನೊಂದಣಿ ಮಾಡಿದ್ದಾರೆ. 52,900 ಹೆಕ್ಟೇರ್ ಕೃಷಿ ಭೂಮಿ ಪೈಕಿ 11,439 ಹೆಕ್ಟೆರ್ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.21.59 ಗುರಿ ಸಾಧನೆಯಾಗಿದೆ. ರಾಗಿ ಪ್ರಮುಖ ಕೃಷಿ ಬೆಳೆಯಾಗಿದೆ, ಆದರೆ ಈ ಬಾರಿ ಸಾವೆ ಬೆಳೆ ವಿಸ್ತೀರ್ಣ ಹೆಚ್ಚಾಗಿದ್ದು 7325 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾಹಿತಿ ನೀಡಿದರು.
ಹೊಸದುರ್ಗ ತಾಲ್ಲೂಕಿನಲ್ಲಿ 40,991 ಹೆಕ್ಟೆರ್ ತೋಟಗಾರಿಕೆ ಬೆಳೆಯಿದ್ದು, ಈ ಪೈಕಿ 32,000 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಿದೆ. ಸಣ್ಣ ಹಿಡುವಳಿ ಹೊಂದಿದ 81,900 ತೋಟಗಾರಿಕೆ ರೈತರಿದ್ದಾರೆ. ಹವಮಾನ ಆಧಾರಿತ ವಿಮೆಯಲ್ಲಿ ತೆಂಗು ಬೆಳೆಗೆ ವಿಮೆ ಸೌಲಭ್ಯವಿಲ್ಲ. ಇದರ ಹೊರತಾಗಿ ಅಡಿಕೆ, ಮಾವು ದಾಳಿಂಬೆ, ಈರುಳ್ಳಿ ಬೆಳೆದ 6,700 ರೈತರು ಮಾತ್ರ ಬೆಳೆ ಮಿಮೆ ಮಾಡಿಸಿದ್ದಾರೆ.
ಈ ಭಾಗದಲ್ಲಿ ತೆಂಗು ಬೆಳೆಗೆ, ಬಿಳಿ ನೊಣ(ವೈಟ್ ಫ್ಲೈ) ಕಪ್ಪು ತಲೆ ಹುಳುವಿನ ಬಾದೆ ಹೆಚ್ಚಾಗಿದೆ. ಇದರೊಂದಿಗೆ ಕಾಂಡ ಸೋರುವ ರೋಗವು ಅಧಿಕವಾಗಿದೆ. ಕಪ್ಪು ತಳೆ ಹುಳುವಿನ ಬಾದೆಯಿಂದ ತೆಂಗಿನ ಇಳುವರಿ ಶೇ.90 ರಷ್ಟು ಕುಸಿಯುತ್ತದೆ. ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ತೆಂಗು ಪುನಶ್ಚೇತನ ಕಾರ್ಯಕ್ರಮದಲ್ಲಿ ಹೊಸದಾಗಿ ತೆಂಗು ನಾಟಿ ಮಾಡುವ ರೈತರಿಗೆ ಸಹಾಯಧನ ನೀಡಲಾಗುತ್ತಿದೆ. ಕೀಟ ಬಾದೆಗೆ ಬೇವಿನ ಹಿಂಡಿ ಸಿಂಪರಣೆಗೆ ನೀಡಲಾಗಿದೆ. ಈ ಬಾರಿ ತೆಂಗು ಬೆಳೆಗೆ ವಿಮೆ ಸೌಲಭ್ಯ ಕಲ್ಪಿಸುವಂತೆ ಮಂಡಳಿಗೆ ಶಿಫಾರಸ್ಸು ಮಾಡುವುದಾಗಿ ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎ(ಕೃಷಿ), ಬಿ(ತೋಟಗಾರಿಕೆ) ಹಾಗೂ ಎ+ಬಿ(ಕೃಷಿ ಮತ್ತು ತೋಟಗಾರಿಕೆ) ಮಾದರಿಯಲ್ಲಿ ರೈತರ ವರ್ಗೀಕರಣ ಮಾಹಿತಿ ಸಂಗ್ರಹಿಸಬೇಕು. ವಿಸ್ತೀರ್ಣವಾರು ಬೆಳೆ ವಿವರಗಳನ್ನು ನೀಡಬೇಕು. ಮುಂಬರುವ ದಿನಗಳಲ್ಲಿ ಬರ ಘೋಷಣೆಯಾದರೆ ರೈತರಿಗೆ ಪರಿಹಾರ ನೀಡಲು ಈ ಮಾಹಿತಿಗಳು ಉಪಯುಕ್ತವಾಗಲಿವೆ. ತಾಲ್ಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಮಾಡುವಂತೆ ಸಚಿವ ಟಿ. ರಘುಮೂರ್ತಿ ಹೇಳಿದರು.
ಬರ ನಿರ್ವಹಣೆಗೆ ಅಗತ್ಯ ಪರಿಹಾರಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಆಗ್ರಹ: ತಾಲೂಕಿನಲ್ಲಿ ತೀವ್ರ ಮಳೆ ಅಭಾವದಿಂದಾಗಿ ರಾಗಿ, ಸಾವೆ ಸೇರಿದಂತೆ ಪ್ರಮುಖ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಕುಡಿಯುವ ನೀರು ಹಾಗೂ ಮೇವಿನ ಅಭಾವ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗುವ ಲಕ್ಷಣಗಳಿದ್ದು, ಸರ್ಕಾರ ತಕ್ಷಣವೇ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಆಗ್ರಹಿಸಿದರು.
ತಾಲೂಕಿನ ಪ್ರಮುಖ ಬೆಳೆಯಾದ ಸಾವೆಯನ್ನು ಬಿತ್ತನೆ ಮಾಡಲಾಗಿದ್ದರೂ ಮಳೆಯಿಲ್ಲದೆ ಕಟಾವಿಗೆ ಬಾರದೆ ಒಣಗಿಹೋಗಿದೆ. ಇನ್ನು ರಾಗಿ ಬಿತ್ತನೆ ಮಾಡಲು ರೈತರು ಸಿದ್ಧರಿದ್ದರೂ ಮಳೆ ಬಾರದೆ ಬಿತ್ತನೆಯೇ ಸಾಧ್ಯವಾಗಿಲ್ಲ. ತೋಟಗಾರಿಕೆ ಬೆಳೆಗಳಾದ ತೆಂಗು ಮತ್ತು ಅಡಿಕೆ ತೋಟಗಳು ನೀರಿನ ಅಭಾವದಿಂದ ಒಣಗಿ ನಾಶವಾಗುತ್ತಿವೆ. ತಾಲೂಕಿನಲ್ಲಿ ಈಗಾಗಲೇ ಬೋರ್ವೆಲ್ಗಳನ್ನು ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಪ್ರಸ್ತುತ ಬಿಡುಗಡೆ ಮಾಡಿರುವ ರೂ.1 ಕೋಟಿ ಅನುದಾನದಲ್ಲಿ ಅಗತ್ಯವಿರುವ ಕಡೆ ಪೈಪ್ಲೈನ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ತಕ್ಷಣವೇ ಜನರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹೊಸದುರ್ಗ ಸೇರಿದಂತೆ ತಾಲ್ಲೂಕಿನ 13 ಹೋಬಳಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಕಲ್ಲೋಡ್ ಬ್ಯಾರೇಜ್ ಬರಿದಾಗುತ್ತಿದೆ. ಜಿಲ್ಲೆಯ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ 5 ಟಿ.ಎಂ.ಸಿ ನೀರು ಹರಿಸಲು ವಿಕೋಪ ಪರಿಹಾರಗಳ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು. ಹೊಸದುರ್ಗ ಪಟ್ಟಣ 23 ವಾರ್ಡ್ಗಳಿಗೆ 24*7 ಕುಡಿಯುವ ನೀರು ಸಬರಾಜು ಮಾಡಲು ನಗರೋತ್ಥಾನ ಯೋಜನೆಯಡಿ ರೂ.25 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ, ಅನುಮೋದನೆ ಕಳುಹಿಸಲಾಗಿದೆ. ಕೂಡಲೇ ಅನುಮೋದನೆ ದೊರೆಯುವಂತೆ ಮಾಡಬೇಕು ಎಂದರು.



