ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಜವಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ವಿಜಯ ಪ್ರಕಾಶ್ ಅವರು ಉಚಿತವಾಗಿ ಅಮೂಲ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಪುಸ್ತಕಗಳನ್ನು ಹಸ್ತಾಂತರಿಸಿದ ಬಳಿಕ ಮಾತನಾಡಿದ ಸಹಾಯಕ ಪ್ರಾಧ್ಯಾಪಕ ವಿಜಯ ಪ್ರಕಾಶ್, "ಕಾಲೇಜು ಗ್ರಂಥಾಲಯಕ್ಕೆ 'ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ನಡವಳಿಕೆಗಳು' ಒಳಗೊಂಡ ಒಟ್ಟು 10 ಸಂಪುಟಗಳು ಹಾಗೂ ಥರ್ ಸ್ಟೈನ್ ಅವರ 'ದಕ್ಷಿಣ ಭಾರತದ ಬುಡಕಟ್ಟುಗಳು' ಕುರಿತ 7 ಸಂಪುಟಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಈ ಮಹತ್ವದ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದರೆ, ಮುಂದೆ ಸಾಮಾಜಿಕ ಸಂಶೋಧನೆಗಳನ್ನು ನಡೆಸಲು ಇದು ಅತ್ಯಂತ ಸಹಕಾರಿಯಾಗಲಿದೆ" ಎಂದು ತಿಳಿಸಿದರು.
"ಮೊಬೈಲ್ ದೂರವಿಟ್ಟು ಪುಸ್ತಕ ಓದಿ" : ಪ್ರಾಂಶುಪಾಲರ ಕರೆ
ಪುಸ್ತಕಗಳನ್ನು ಸ್ವೀಕರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಧರಣೇಂದ್ರಯ್ಯ, "ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು ಹಾಗೂ ನಮ್ಮ ಶಾಶ್ವತ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಇಂತಹ ಅತ್ಯುತ್ತಮ ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಮೊಬೈಲ್ ಬಳಕೆಯನ್ನು ದೂರವಿಟ್ಟು, ಪುಸ್ತಕಗಳತ್ತ ಗಮನ ಹರಿಸಬೇಕು" ಎಂದು ಕರೆ ನೀಡಿದರು. ಇದೇ ವೇಳೆ ಕಾಲೇಜು ಹಾಗೂ ವಿದ್ಯಾರ್ಥಿಗಳ ಪರವಾಗಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ವಿಜಯ ಪ್ರಕಾಶ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧೀಕ್ಷಕ ಬಿ.ಎನ್. ನರಸಿಂಹಮೂರ್ತಿ, ಉಪನ್ಯಾಸಕರಾದ ನಾಗರಾಜ ವಿ., ಪುಟ್ಟರಾಜು ಹಾಗೂ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



