ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಬೈರೇಗೌಡ ಅವರಿಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಅಧಿಕಾರ ವಹಿಸಿಕೊಳ್ಳಲು ಆದ ವಿಳಂಬ ಹಾಗೂ ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಕುರಿತು ಮಾರ್ಮಿಕವಾಗಿ ಲೇವಡಿ ಮಾಡಿದ್ದಾರೆ.
‘ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್’ ನೆನಪಿಸಿದ 12 ದಿನಗಳ ಕಾಯುವಿಕೆ!ಸಚಿವರು ಖಾತೆ ವಹಿಸಿಕೊಳ್ಳಲು ತೆಗೆದುಕೊಂಡ ಸಮಯವನ್ನು ಉಲ್ಲೇಖಿಸಿದ ನಿಖಿಲ್ ಕುಮಾರಸ್ವಾಮಿ, "ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ!" ಎಂದು ಲೇವಡಿ ಮಾಡಿದ್ದಾರೆ.
ಬ್ಲೂಪ್ರಿಂಟ್ ಇಲ್ಲದ ನಗರಾಭಿವೃದ್ಧಿ: ವಿಶಿಷ್ಟ ಸವಾಲು
ಹೊಸ ಸಚಿವರ ಮುಂದಿರುವ ಆಡಳಿತಾತ್ಮಕ ಗೊಂದಲಗಳನ್ನು ಪ್ರಸ್ತಾಪಿಸಿದ ಅವರು, "ನಿಮ್ಮ ಖಾತೆಗೆ 'ನಗರಾಭಿವೃದ್ಧಿ' ಅಂತ ಹೆಸರೇನೋ ಇದೆ, ಆದ್ರೆ ಟೌನ್ ಪ್ಲಾನಿಂಗ್ ಸಂಸ್ಥೆಗಳಾದ BDA ಮತ್ತು BMRDA ಮಾತ್ರ ಮುಖ್ಯಮಂತ್ರಿಗಳ ಬಳಿಯೇ ಇವೆ! ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿ ಮಾಡುವುದು ನಿಜಕ್ಕೂ ದೊಡ್ಡ ಸವಾಲೇ ಸರಿ" ಎಂದು ಸರ್ಕಾರದ ಆಡಳಿತ ವೈಖರಿಯನ್ನು ಚುಚ್ಚಿದ್ದಾರೆ.
ಆದಾಗ್ಯೂ, ಕೃಷ್ಣ ಬೈರೇಗೌಡ ಅವರ ಹಳೇ ಟ್ರ್ಯಾಕ್ ರೆಕಾರ್ಡ್ ನೆನಪಿಸಿದ ನಿಖಿಲ್, "ಹಿಂದೆ ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಬಳಸಿ ನೀವು ತಂದ ವ್ಯವಸ್ಥಿತ ಸುಧಾರಣೆಗಳು ಜನರ ಮನಸ್ಸಿನಲ್ಲಿದೆ. ಎಷ್ಟೇ ಗೊಂದಲಮಯ ವ್ಯವಸ್ಥೆ ಇದ್ದರೂ ಅದನ್ನು ಸರಿಪಡಿಸುವ ಸಾಮರ್ಥ್ಯ ನಿಮಗಿದೆ" ಎಂದು ಸಚಿವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.
ಬೆಂಗಳೂರಿನ ‘ತ್ರಿಮೂರ್ತಿ’ ಸಮಸ್ಯೆಗಳೇ ಸದ್ಯದ ಆದ್ಯತೆ
ಮುಂಗಾರು ಮಳೆ ಆರಂಭವಾಗಿರುವುದರಿಂದ ಬೆಂಗಳೂರಿಗರಿಗೆ ಈಗ ದೊಡ್ಡ ದೊಡ್ಡ ಸ್ಕೈವಾಕ್ಗಳು ಅಥವಾ ಭಾರಿ ಯೋಜನೆಗಳು ಬೇಡ. ಸಚಿವರು ಸದ್ಯಕ್ಕೆ ನಗರದ 'ತ್ರಿಮೂರ್ತಿ' ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ:
ಕಸ ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಸರಿಪಡಿಸುವುದು, ರಾಜಕಾಲುವೆ ಸ್ವಚ್ಛತೆ."ಮಳೆ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ಹಾಗೂ ಸ್ವಚ್ಛ ರಸ್ತೆಗಳು ಬೇಕು. ಈ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು, ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು. ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಮಿನಿಸ್ಟರ್ ಸರ್!" ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.



