ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಕೇಂದ್ರ ಸರ್ಕಾರ ಇಷ್ಟಬಂದಂತೆ ಬೆಲೆ ಏರಿಸುತ್ತಾ ಹೋಗುವುದು, ಅದನ್ನು ಸರಿದೂಗಿಸಲು ನಾವು ತೆರಿಗೆ ಕಡಿಮೆ ಮಾಡುತ್ತಾ ಕೂರಬೇಕಾ?" ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸುವ ಪ್ರಸ್ತಾಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಇಂಧನ ದರ ಏರಿಕೆಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
"ಕೇಂದ್ರ ಬೆಲೆ ಏರಿಸಿದರೆ ನಮ್ಮನ್ನು ಕೇಳ್ತೀರಾ?":ಸಿಎಂ ಆಕ್ಷೇಪ
ಇಂಧನ ದರ ಏರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ತನ್ನ ಪಾಲಿನ ತೆರಿಗೆಯನ್ನು ಕಡಿಮೆ ಮಾಡಲಿದೆಯೇ ಎಂಬ ಪ್ರಶ್ನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ.
ಅವರ ಪರ ವಕಾಲತ್ತೇ?: "ಅವರು ಬೆಲೆ ಏರಿಸುತ್ತಿದ್ದರೆ ನೀವೇನೂ ಮಾತನಾಡದೆ ಸುಮ್ಮನಿರುತ್ತೀರಿ. ಆದರೆ ನಮಗೆ ಬಂದು ತೆರಿಗೆ ಕಡಿಮೆ ಮಾಡುತ್ತೀರಾ ಅಂತ ಪ್ರಶ್ನೆ ಕೇಳುತ್ತೀರಿ. ನೀವೆಲ್ಲರೂ ಕೇಂದ್ರ ಸರ್ಕಾರದ ಪರವಾಗಿದ್ದೀರಾ?" ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.
ಅಂದಿನ ಮತ್ತು ಇಂದಿನ ದರಗಳ ಹೋಲಿಕೆ: "ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ, ಅಂದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ದೇಶದಲ್ಲಿ ಡೀಸೆಲ್ ಬೆಲೆ ಕೇವಲ 48 ರೂಪಾಯಿ, ಪೆಟ್ರೋಲ್ ಬೆಲೆ 70 ರೂಪಾಯಿ ಹಾಗೂ ಎಲ್ಪಿಜಿ ಸಿಲಿಂಡರ್ ದರ 414 ರೂಪಾಯಿ ಇತ್ತು. ಆದರೆ ಇವತ್ತು ಬೆಲೆ ಎಲ್ಲೋ ಹೋಗಿದೆ. ಈ ಮಟ್ಟಿಗೆ ಬೆಲೆ ಏರಿಕೆ ಮಾಡಿದ್ದು ಯಾರು?" ಎಂದು ನೇರವಾಗಿ ಪ್ರಶ್ನಿಸಿದರು.
ಬಿಜೆಪಿ ಪ್ರತಿ ಸವಾಲು:ಕಾಂಗ್ರೆಸ್ ಆಕ್ರೋಶ
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಇಂಧನ ದರ ಹೆಚ್ಚಳ ಮಾಡಿರುವುದರ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ಪ್ರತಿಭಟನೆ ಹಾಗೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ನಾಯಕರು, "ಕಾಂಗ್ರೆಸ್ ಪಕ್ಷಕ್ಕೆ ಜನಸಾಮಾನ್ಯರ ಮೇಲೆ ನಿಜವಾದ ಕಾಳಜಿಯಿದ್ದರೆ ಮೊದಲು ರಾಜ್ಯ ಸರ್ಕಾರ ವಿಧಿಸುತ್ತಿರುವ ಇಂಧನ ತೆರಿಗೆಯನ್ನು ಕಡಿಮೆ ಮಾಡಿ ಜನರಿಗೆ ಸುಲಭ ದರದಲ್ಲಿ ಪೆಟ್ರೋಲ್, ಡೀಸೆಲ್ ಸಿಗುವಂತೆ ಮಾಡಲಿ" ಎಂದು ಪ್ರತಿ ಸವಾಲು ಹಾಕಿದ್ದರು. ಈ ರಾಜಕೀಯ ಜಟಾಪಟಿಯ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ತೆರಿಗೆ ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನಸಾಮಾನ್ಯರ ಬದುಕಿನ ಮೇಲೆ ಕೇಂದ್ರದ ಬರೆ: ವಾಗ್ದಾಳಿ
"ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಪೆಟ್ರೋಲ್ಮತ್ತು ಡೀಸೆಲ್ದರಗಳನ್ನು ತಲಾ 3 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದು ಬರೀ ಬೆಲೆ ಏರಿಕೆಯಲ್ಲ, ದೇಶದ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ." ಮುಖ್ಯಮಂತ್ರಿ ಸಿದ್ದರಾಮಯ್ಯ.
ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ಪರಿಣಾಮಗಳನ್ನು ಮೋದಿ ಸರ್ಕಾರ ಬಲವಂತವಾಗಿ ದೇಶದ ಜನತೆಯ ತಲೆಯ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಯುವ ಬದಲು, ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸಲು ಕೇಂದ್ರ ಮುಂದಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.



