ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಮೊಹಮ್ಮದ್ ಸಿರಾಜ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಪ್ರಕರಣ ಜಿಲ್ಲಾ ಕಾಂಗ್ರೆಸ್ನಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಪಕ್ಷದ ಆಂತರಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಆಡಿಯೋದಲ್ಲಿರುವ ಸಂಭಾಷಣೆ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ಮಹಾನಗರ ಪಾಲಿಕೆ ಮಾಜಿ ಮೇಯರ್ ಚಮನ್ ಸಾಬ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಜಮೀರ್ ಅಹ್ಮದ್ ಉಚ್ಚಾಟನೆಗೆ ಡಿ.ಬಸವರಾಜ್ ಆಗ್ರಹ:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, "ಪಕ್ಷಕ್ಕೆ ದ್ರೋಹ ಬಗೆದಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ತಕ್ಷಣವೇ ಕಾಂಗ್ರೆಸ್ನಿಂದ ಉಚ್ಚಾಟಿಸಬೇಕು" ಎಂದು ಒತ್ತಾಯಿಸಿದರು.
ಹಣ ಹಂಚಿಕೆಯ ಆರೋಪ: "ಮಡಿಕೇರಿಯಿಂದ ಬಂದಿದ್ದ ಎಸ್ಡಿಪಿಐ ಅಭ್ಯರ್ಥಿ ಮನೆ ಮನೆಗೆ ಕೋಟ್ಯಂತರ ರೂಪಾಯಿ ಹಣ ಹಂಚಿದ್ದಾನೆ. ದಾವಣಗೆರೆಗೆ ಬರಲು ಹಣವಿಲ್ಲದ ಆತನಿಗೆ ಇಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ಬಂತು? ಎಸ್ಡಿಪಿಐ ಅಭ್ಯರ್ಥಿ ತಲಾ ಎರಡು ಸಾವಿರ ರೂ. ಹಂಚಿಕೆ ಮಾಡಿರುವ ಬಗ್ಗೆ ನಮ್ಮ ಕಾರ್ಯಕರ್ತರೇ ಮಾಹಿತಿ ನೀಡಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಎಐ ನೆಪ ಒಪ್ಪಲು ಸಾಧ್ಯವಿಲ್ಲ: "ನಮಗೆ ಹೆತ್ತ ತಾಯಿಯೂ ಒಂದೇ, ಕಾಂಗ್ರೆಸ್ ಪಕ್ಷವೂ ಒಂದೇ. ಇಂತಹ ಪಕ್ಷಕ್ಕೆ ದ್ರೋಹ ಮಾಡಿ, ಈಗ ಸಿಕ್ಕಿಬಿದ್ದಾಗ 'ಇದು ಕೃತಕ ಬುದ್ಧಿಮತ್ತೆ ಸೃಷ್ಟಿ' ಎಂದು ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಆಡಿಯೋವನ್ನು ಎಫ್ಎಸ್ಎಲ್ ತನಿಖೆಗೆ ಒಳಪಡಿಸಬೇಕು. ತಾವು ತಪ್ಪು ಮಾಡಿಲ್ಲ ಎನ್ನುವುದಾದರೆ ಜಮೀರ್ ಅಹ್ಮದ್ ಸ್ವಯಂಪ್ರೇರಿತರಾಗಿ ಮಂಕುಬೂದಿ (ಮಂಪರು) ಪರೀಕ್ಷೆಗೆ ಒಳಗಾಗಲಿ" ಎಂದು ಸವಾಲು ಹಾಕಿದರು.
ಹೈಕಮಾಂಡ್ಗೆ ದೂರು: ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ವರಿಷ್ಠರಿಗೆ ಇ-ಮೇಲ್ ಹಾಗೂ ಸ್ಪೀಡ್ ಪೋಸ್ಟ್ ಮೂಲಕ ದೂರಿನ ಪ್ರತಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
'ಧರ್ಮಸ್ಥಳದಂತೆ ನಮಗೂ ಪವಿತ್ರ ಸ್ಥಳವಿದೆ, ಬಂದು ಆಣೆ ಮಾಡಲಿ': ಚಮನ್ ಸಾಬ್ ಸವಾಲು
ಮಾಜಿ ಮೇಯರ್ ಚಮನ್ ಸಾಬ್ ಮಾತನಾಡಿ, ವೈರಲ್ ಆಡಿಯೋ ಸುಳ್ಳಾಗಿದ್ದರೆ ಜಮೀರ್ ಅಹ್ಮದ್ ತಾವೇ ನಿಗದಿಪಡಿಸುವ ಪವಿತ್ರ ಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
"ಚಾಮರಾಜಪೇಟೆಯಿಂದ ಬಂದ ಕಾರ್ಯಕರ್ತರು ಇಲ್ಲಿ ಎಸ್ಡಿಪಿಐ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿಯನ್ನು ಗೆಲ್ಲಿಸುವುದೇ ಇವರ ಏಕೈಕ ಕಾರ್ಯಸೂಚಿಯಾಗಿತ್ತು. ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಒಬ್ಬರು ಇಲ್ಲಿ ಬಂದು ಚುನಾವಣೆ ನಡೆಸಿದ್ದಾರೆ. ಹಿಂದೂಗಳಿಗೆ ಹೇಗೆ ಧರ್ಮಸ್ಥಳ ಪವಿತ್ರವೋ, ಹಾಗೇ ಮುಸ್ಲಿಮರಿಗೂ ಪವಿತ್ರ ಸ್ಥಳವಿದೆ. ಜಮೀರ್ ಅಹ್ಮದ್ ಮತ್ತು ಅವರ ತಂಡ ಬರುವುದಾದರೆ ನಾವೇ ಜಾಗ ನಿಗದಿಪಡಿಸುತ್ತೇವೆ, ಬರಲು ಖರ್ಚಿನ ಹಣವನ್ನೂ ಕೊಡುತ್ತೇವೆ. ಬಂದು ಪ್ರಮಾಣ ಮಾಡಲಿ" ಎಂದು ಸವಾಲು ಹಾಕಿದರು.
ಅಲ್ಲದೆ, "ಅಸಾದುದ್ದಿನ್ ಓವೈಸಿ ಮನೆ ಮೇಲೆ ಎಂದಾದರೂ ಇ.ಡಿ ಅಥವಾ ಐಟಿ ದಾಳಿ ನಡೆದಿದೆಯೇ?" ಎಂದು ಪ್ರಶ್ನಿಸಿದ ಅವರು, ಮುಸ್ಲಿಂ ಧರ್ಮಾಧಾರಿತ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹೆಸರನ್ನು ಅನಗತ್ಯವಾಗಿ ಎಳೆಯಲಾಗಿದೆ: ಶ್ರೀನಿವಾಸ ದಾಸಕರಿಯಪ್ಪ ಸ್ಪಷ್ಟನೆ:
ವೈರಲ್ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಕುರಿತು ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ಆಡಿಯೋದಲ್ಲಿ ನನ್ನ ಬಗ್ಗೆ ಮಾತನಾಡಿರುವುದು ಸಂಪೂರ್ಣ ಸತ್ಯಕ್ಕೆ ದೂರವಾದದ್ದು" ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪರ್ಕವೇ ಇರಲಿಲ್ಲ: "ಮೊಹಮ್ಮದ್ ಸಿರಾಜ್ ಅವರು ವರ್ಷದ ಹಿಂದೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಸಿಕ್ಕಾಗ ನಮಸ್ಕಾರ ಮಾಡಿದ್ದರು. ಅದನ್ನು ಬಿಟ್ಟರೆ ಇತ್ತೀಚಿನ ಚುನಾವಣೆ ವೇಳೆ ಅವರು ನನಗೆ ಸಿಕ್ಕಿಲ್ಲ. ಇನ್ನು ಜಮೀರ್ ಅಹ್ಮದ್ ಅವರ ಪರಿಚಯವೇ ನನಗಿಲ್ಲ. ಹಾಗಿರುವಾಗ ನಾನು ಅವರ ಕಾಲು ಬಿದ್ದಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಒಂದು ವೇಳೆ ಹಾಗೇನಾದರೂ ಆಗಿದ್ದರೆ ಆ ವಿಡಿಯೋ ವೈರಲ್ ಆಗುತ್ತಿರಲಿಲ್ಲವೇ?" ಎಂದು ಪ್ರಶ್ನಿಸಿದರು.
ಒಪ್ಪಂದ ಮಾಡಿಕೊಂಡಿದ್ದರೆ ಗೆಲ್ಲುತ್ತಿದ್ದೆ: "ಕ್ಷೇತ್ರದ ಜನ ನನಗೆ 64 ಸಾವಿರ ಮತಗಳನ್ನು ನೀಡಿದ್ದಾರೆ. ಬಡವನ ಮಗನಾಗಿ ನಾನು ಚುನಾವಣೆ ಎದುರಿಸಿದ್ದೇನೆ. ಆದರೆ ಅವರು ಹಣ, ಹೆಂಡ, ಸೀರೆ ಹಂಚಿ ಚುನಾವಣೆ ಮಾಡಿದ್ದಾರೆ. ನಾವು ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರೆ ನಾನೇ ಗೆಲ್ಲುತ್ತಿದ್ದೆ. ಸಿರಾಜ್ ಅವರೇ ಇದು ಎಐ ಸೃಷ್ಟಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ, ಇದರ ಸಮಗ್ರ ತನಿಖೆಯಾಗಲಿ" ಎಂದರು.
ಬಿಜೆಪಿ ಗೆಲ್ಲಿಸಲು ಮತ ಹಾಕಿಲ್ಲ: ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನದಿಂದ ಅವರು ಎಸ್ಡಿಪಿಐಗೆ ಮತ ಹಾಕಿದ್ದಾರೆಯೇ ಹೊರತು, ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದಲ್ಲ ಎಂದು ಶ್ರೀನಿವಾಸ್ ವಿಶ್ಲೇಷಿಸಿದರು.
ಒಟ್ಟಾರೆಯಾಗಿ, ಈ ಆಡಿಯೋ ಬಾಂಬ್ ದಾವಣಗೆರೆ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದು, ಕಾಂಗ್ರೆಸ್ ಆಂತರಿಕ ವಲಯದಲ್ಲಿನ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿದೆ.



