ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅರಿವಿನ ಹೊನಲು ಸಂಸ್ಥೆ ಹಾಗೂ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾಲೇಜು ಅವರಣದಲ್ಲಿ 'ಪೋಕ್ಸೋ' ಹಾಗೂ ಮಹಿಳಾ ಸುರಕ್ಷತಾ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಣ್ಣ, ಡಾ. ಜಯಲಕ್ಷ್ಮಮ್ಮ, ಡಾ. ಮಧುಸೂಧನ್, ಹಲಸಂದಿ ಸತೀಶ್, ಗಾಯಿತ್ರಮ್ಮ ಟಿ., ಅಣ್ಣಪ್ಪ, ಅವಿನಾಶ್ ಸಿ.ಎಲ್. ಹಾಗೂ ಭೂತರಾಜು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಟ್ರಾಸಿಟಿ ಕಮಿಟಿ ಸದಸ್ಯ ಅವಿನಾಶ್ ಸಿ.ಎಲ್., "ಪೋಕ್ಸೋ ಕಾಯ್ದೆಯು ಹೆಣ್ಣುಮಕ್ಕಳ ರಕ್ಷಣೆಗೆ ಅತ್ಯಂತ ಬಲವಾದ ಅಸ್ತ್ರವಾಗಿದೆ. ಮಹಿಳೆಯರ ಸುರಕ್ಷತೆಯಲ್ಲಿ ಕಾನೂನಿನ ಅರಿವು ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಮಾಹಿತಿ ನೀಡಿದರು.
ವಕೀಲ ಹಾಗೂ ಸಮಾಜ ಚಿಂತಕ ವಿ.ಎಸ್. ಭೂತರಾಜು ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದುವುದರ ಪ್ರಾಮುಖ್ಯತೆಯನ್ನು ವಿವರಿಸಿದರು. ಅರಿವಿನ ಹೊನಲು ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, "ಮಹಿಳೆ ಅಬಲೆಯಲ್ಲ. ಆಕೆಯ ರಕ್ಷಣೆಗೆ ಅನೇಕ ಕಾನೂನುಗಳಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು" ಎಂದರು. ನಂದನ್ ಎಲ್. ಅವರು ವಿಷಯಾಧಾರಿತವಾಗಿ ಮಾತನಾಡಿದರು.
ಸಮಾರಂಭದಲ್ಲಿ ಅರಿವಿನ ಹೊನಲು ಸಂಸ್ಥೆಯ ಕಾರ್ಯದರ್ಶಿ ಅನಿಲ್ ಎಸ್. ಅಳಗವಾಡಿ, ಉಪಾಧ್ಯಕ್ಷ ನಾಗರಾಜ್ ಕೆ., ನಿರ್ದೇಶಕರಾದ ರಘು, ರಮೇಶ್ ಲಿಂಗದಹಳ್ಳಿ, ದಿಲೀಪ್ ಆನಿವಾಳ, ಸುದೀಪ್ ಆರ್., ಜಯ್ಯಣ್ಣ ಟಿ., ಕಲ್ಯಾಣ್ ಕುಮಾರ್ ಎಸ್., ಅಣ್ಣೇಶ್ ಆರ್., ನಿತಿನ್ ಸಿ., ಮಂಜು ಎಸ್., ಕೊಟೇಶ್ ಬಿ.ಹೆಚ್. ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



