ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವನ್ನೇ ನಡುಗಿಸಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ಮೈಂಡ್ ಹಾಗೂ ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಪಾಕಿಸ್ತಾನದಲ್ಲಿ 'ಅಪರಿಚಿತ' ಬಂದೂಕುಧಾರಿಗಳ ದಾಳಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಈ ಕುರಿತು ಟ್ವೀಟ್ (ಎಕ್ಸ್) ಮಾಡಿರುವ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ, ಭಾರತದ ಯೋಧರ ತ್ಯಾಗಕ್ಕೆ ತಕ್ಕ ನ್ಯಾಯ ಸಿಕ್ಕಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಯೋಧರ ತ್ಯಾಗಕ್ಕೆ ಸಂದ ಬೆಲೆ:
"40 ಸಿಆರ್ಪಿಎಫ್ ಯೋಧರ ವೀರ ಮರಣಕ್ಕೆ ಕಾರಣನಾಗಿದ್ದ ಉಗ್ರ ಗುಂಡೇಟು ತಿಂದು ಸತ್ತಿದ್ದಾನೆ. ಭಾರತಕ್ಕೆ ಉಂಟುಮಾಡುವ ಪ್ರತಿಯೊಂದು ಗಾಯಕ್ಕೂ ಈಗ ತಕ್ಕ ಉತ್ತರ ನೀಡಲಾಗುತ್ತಿದೆ. ಈ ಉಗ್ರನ ಅಂತ್ಯ ನಮ್ಮ ಹೆಮ್ಮೆಯ ಯೋಧರ ತ್ಯಾಗಕ್ಕೆ ಸಂದ ನೈಜ ಬೆಲೆಯಾಗಿದೆ" ಎಂದು ಸಿ.ಟಿ. ರವಿ ಹೆಳಿದ್ದಾರೆ.
ಪಾಕಿಸ್ತಾನದಲ್ಲಿ ಹೆಚ್ಚಿದ ಭಯದ ವಾತಾವರಣ:
ಭಾರತದ ವಿರುದ್ಧ ಸದಾ ಸಂಚು ರೂಪಿಸುವ ಉಗ್ರರಿಗೆ ಈಗ ಪಾಕಿಸ್ತಾನದಲ್ಲೂ ರಕ್ಷಣೆ ಇಲ್ಲದಂತಾಗಿದೆ. ಇನ್ನು ಮುಂದೆ ಭಾರತದ ವಿರುದ್ಧ ಯಾವುದೇ ರೀತಿಯ ಉಗ್ರ ಚಟುವಟಿಕೆಗಳನ್ನು ನಡೆಸಲು ಭಯೋತ್ಪಾದಕರು ನಡುಗುವಂತಹ ಭೀಕರ ವಾತಾವರಣ ಇಂದು ಪಾಕಿಸ್ತಾನದ ನೆಲದಲ್ಲಿ ಸೃಷ್ಟಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಿವಾಳಿಯಾಗುವ ಹಾದಿಯಲ್ಲಿ ಪಾಕಿಸ್ತಾನ:
ಭಯೋತ್ಪಾದನೆಯನ್ನು ಸದಾ ಪೋಷಿಸಿಕೊಂಡು ಬಂದಿರುವ ಪಾಕಿಸ್ತಾನಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಈಗ ಉತ್ತರ ಸಿಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ಏಕಾಂಗಿಯಾಗುವ ಹಾಗೂ ಆರ್ಥಿಕವಾಗಿ ದಿವಾಳಿಯಾಗುವ ದಿನಗಳು ಇನ್ನು ದೂರವಿಲ್ಲ ಎಂದು ಸಿ.ಟಿ. ರವಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಕೆಲವು ಸಮಯದಿಂದ ಪಾಕಿಸ್ತಾನದ ನೆಲದಲ್ಲಿ ಭಾರತ ವಿರೋಧಿ ಉಗ್ರರು ಸರಣಿ ಅಪರಿಚಿತ ದಾಳಿಗಳಿಗೆ ಬಲಿಯಾಗುತ್ತಿದ್ದು, ಹಮ್ಜಾ ಬುರ್ಹಾನ್ ಹತ್ಯೆ ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.



