ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 50ರ ಮಾಡನಾಯಕನಹಳ್ಳಿ ಸಮೀಪ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿವರ:
ದಿನಾಂಕ 30.04.2026 ರಂದು ಬೆಳಗಿನ ಜಾವ ಹೊಸಪೇಟೆ ಕಡೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಟ್ಯಾಂಕರ್ ಲಾರಿ (KA-28-AA-5305) ಕೂಲೆಂಟ್ ಸಮಸ್ಯೆಯಿಂದಾಗಿ ಕೆಟ್ಟು ನಿಂತಿತ್ತು. ಲಾರಿ ಚಾಲಕ ಅನಿಲ್ ಎಂಬುವವರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ರಸ್ತೆಯ ಎಡಬದಿಯಲ್ಲಿ ಲಾರಿಯನ್ನು ನಿಲುಗಡೆ ಮಾಡಿದ್ದರು.
ಬೆಳಿಗ್ಗೆ ಸುಮಾರು 05.45 ಗಂಟೆಗೆ ಅದೇ ಮಾರ್ಗವಾಗಿ ಬಂದ ಕಾರು (KA-05-NH-6363), ನಿಂತಿದ್ದ ಟ್ಯಾಂಕರ್ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕ ಡಿ.ಕೆ. ಕೃತಿಕ (27 ವರ್ಷ) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸ್ ಕ್ರಮ:
ಪ್ರಕರಣ ದಾಖಲು: ಟ್ಯಾಂಕರ್ ಚಾಲಕ ಅನಿಲ್ ಮತ್ತು ಮೃತ ಕಾರು ಚಾಲಕ ಡಿ.ಕೆ. ಕೃತಿಕ ಇಬ್ಬರ ವಿರುದ್ಧವೂ ಮಾರಣಾಂತಿಕ ಅಪಘಾತ ಪ್ರಕರಣ ದಾಖಲಿಸಲಾಗಿದೆ.
ಸ್ಥಳ ಪರಿಶೀಲನೆ: ತುರುವನೂರು ಪೊಲೀಸ್ ನಿರೀಕ್ಷಕ ಬಸವರಾಜ್ ಪಾಟೀಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕರಿಗೆ ಪೊಲೀಸ್ ಅಧೀಕ್ಷಕರ ಮನವಿ:
ರಸ್ತೆಯ ಮೇಲೆ ಯಾವುದೇ ಮುನ್ಸೂಚನೆ ನೀಡದೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಇಂತಹ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ವಾಹನ ಚಾಲಕರು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


