ಚಂದ್ರವಳ್ಳಿ ನ್ಯೂಸ್, ಕಣಜನಹಳ್ಳಿ:
ಹೆಣ್ಣು ಮಕ್ಕಳ ರಕ್ಷಣೆ ಮತ್ತು ಅವರ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೇಣುಕಾ ಕರೆ ನೀಡಿದರು.
ಗ್ರಾಮದ ಸರ್ಕಾರಿ ಶಾಲಾ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಪೋಷಕರು ಮತ್ತು ಸಮಾಜ ಜಂಟಿಯಾಗಿ ಶ್ರಮಿಸಬೇಕಾದ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಅವರು, ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವಂತಾಗಲು ಪಂಚಾಯಿತಿ ಮಟ್ಟದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸದಾ ಸಿದ್ಧ ಎಂದರು.
KMSPB ಸಂಸ್ಥೆಯ ಜಯರಾಮ್, ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಹಾಗೂ ಶಿಕ್ಷಕ ಗಿರಿರಾಜ್ ಅವರು ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಮಹತ್ವ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದಿಂದ ಸಮಾಜದಲ್ಲಿ ಆಗುವ ಧನಾತ್ಮಕ ಬದಲಾವಣೆಗಳ ಕುರಿತು ಜಾಗೃತಿ ಮೂಡಿಸುವ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮೇಘನಾ, ಲಕ್ಷ್ಮಿದೇವಿ, ಶ್ರೀದೇವಿ, ರಂಜಿತಾ, ಶೃತಿ, ದುರ್ಗಮ್ಮ, ದೇವಿರಮ್ಮ, ಭಾಗ್ಯಮ್ಮ, ಸಿದ್ದಗಂಗಮ್ಮ, ಪಾರ್ವತಮ್ಮ ಹಾಗೂ ಜಯಮ್ಮ ಉಪಸ್ಥಿತರಿದ್ದರು. ಅಲ್ಲದೆ, ಅಂಗನವಾಡಿ ಸಹಾಯಕಿಯರಾದ ಮುದ್ದಮ್ಮ ಮತ್ತು ಗಾಯತ್ರಮ್ಮ ಅವರು ಭಾಗವಹಿಸಿದ್ದರು.
ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು, ಮಕ್ಕಳ ತಾಯಂದಿರು ಹಾಗೂ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



