ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ವಿಮಾನವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ರನ್ವೇಗೆ ಹಿಂಭಾಗ ಅಪ್ಪಳಿಸಿದ ಭೀಕರ ಘಟನೆ ಗುರುವಾರ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಅವಘಡಕ್ಕೆ ಕಾರಣವೇನು? :
ಏರ್ ಇಂಡಿಯಾ ಸಂಸ್ಥೆಯ AI2651 ಸಂಖ್ಯೆಯ ವಿಮಾನವು ಎಂದಿನಂತೆ ದೆಹಲಿಯಿಂದ ಉಡಾವಣೆಗೊಂಡು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಆದರೆ, ರನ್ವೇನಲ್ಲಿ ಇಳಿಯುವ ಕೊನೆಯ ಕ್ಷಣದಲ್ಲಿ ತಾಂತ್ರಿಕ ಅಡಚಣೆ ಎದುರಾಗಿದೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಈ ವಿಮಾನ ಇಳಿಯುವ ಕೆಲವೇ ಕ್ಷಣಗಳ ಮುನ್ನ ಅದೇ ರನ್ವೇಯಿಂದ ಬೃಹತ್ ಸರಕು ಸಾಗಣೆ ವಿಮಾನವೊಂದು ಟೇಕ್ಆಫ್ ಆಗಿತ್ತು. ಇದರಿಂದಾಗಿ ರನ್ವೇ ಸುತ್ತಲಿನ ವಾತಾವರಣದಲ್ಲಿ ಭಾರಿ ಪ್ರಮಾಣದ ಗಾಳಿಯ ಸುಳಿ ಸೃಷ್ಟಿಯಾಗಿತ್ತು.
ಈ ತೀವ್ರ ಗಾಳಿಯ ವೇಗಕ್ಕೆ ಸಿಲುಕಿ ಏರ್ ಇಂಡಿಯಾ ವಿಮಾನದ ಸಮತೋಲನ ತಪ್ಪಿದೆ. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನವನ್ನು ರಕ್ಷಿಸಲು ಪುನಃ ಮೇಲಕ್ಕೆ ಹಾರಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ವಿಮಾನದ ಹಿಂಭಾಗದ ಕೆಳಭಾಗ ರನ್ವೇಗೆ ಬಲವಾಗಿ ಅಪ್ಪಳಿಸಿದೆ.
ಪ್ರಯಾಣಿಕರು ಸುರಕ್ಷಿತ:
ರನ್ವೇಗೆ ವಿಮಾನದ ಭಾಗ ಜಜ್ಜಿದ ತಕ್ಷಣವೇ ಪೈಲಟ್ಗಳು ಅತ್ಯಂತ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿ, ವಿಮಾನವನ್ನು ಸುರಕ್ಷಿತವಾಗಿ ರನ್ವೇ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ವಿಮಾನವು ತಾಂತ್ರಿಕ ತೊಂದರೆಯ ನಡುವೆಯೂ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ."
ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿ.
ಪೈಲಟ್ಗಳು ಸಸ್ಪೆಂಡ್: ತನಿಖೆಗೆ ಡಿಜಿಸಿಎ ಆದೇಶ:
ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ನಿಯಮಾವಳಿಗಳ ಪ್ರಕಾರ, ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ವಿಮಾನದ ಕಮಾಂಡರ್ ಸೇರಿದಂತೆ ಇಬ್ಬರೂ ಪೈಲಟ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ವಿಮಾನದ ಬ್ಲ್ಯಾಕ್ ಬಾಕ್ಸ್ ಹಾಗೂ ರನ್ವೇ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.



