ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ತುಮಕೂರು ಜಿಲ್ಲೆಗೆ ತನ್ನದೇ ಆದ ಭವ್ಯ ಇತಿಹಾಸ ಮತ್ತು ಅಸ್ಮಿತೆಯಿದೆ. ಅದನ್ನು ಬದಲಾಯಿಸಲು ನನ್ನಂಥವನಿಂದ ಸಾಧ್ಯವೇ ಇಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 'ಬೆಂಗಳೂರು ಉತ್ತರ' ಭಾಗವನ್ನಾಗಿ ಮಾಡಿ ಎಂದು ಕೇಳಿದ್ದೇನೆಯೇ ಹೊರತು, ಜಿಲ್ಲೆಯ ಹೆಸರು ಅಥವಾ ಅಸ್ಮಿತೆ ಬದಲಿಸುವ ಯಾವುದೇ ಉದ್ದೇಶ ನಮಗಿಲ್ಲ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರನ್ನು ಬೆಂಗಳೂರಿಗೆ ಸೇರಿಸುವ ಪ್ರಸ್ತಾವನೆಯ ಸುತ್ತ ಎದ್ದಿರುವ ವಿವಾದ ಹಾಗೂ ಗೊಂದಲಗಳಿಗೆ ತೆರೆ ಎಳೆದರು.
ತುಮಕೂರು ಹೆಸರು, ವಿಸ್ತೀರ್ಣ ಬದಲಾಗಲ್ಲ: ವಿಕೇಂದ್ರೀಕರಣವೇ ಉದ್ದೇಶ
ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ ಗೃಹ ಸಚಿವರು, ಈ ಯೋಜನೆಯ ಹಿಂದಿನ ಆರ್ಥಿಕ ಮತ್ತು ಕೈಗಾರಿಕಾ ಮಹತ್ವವನ್ನು ವಿವರಿಸಿದರು. ಅಸ್ಮಿತೆಗೆ ಧಕ್ಕೆಯಿಲ್ಲ:
"ತುಮಕೂರಿನ ಬಗ್ಗೆ ಎಲ್ಲರಿಗೂ ಎಷ್ಟು ಸೆಂಟಿಮೆಂಟ್ಸ್ ಇದೆಯೋ, ನನಗೂ ಅಷ್ಟೇ ಇದೆ. ಏಕೆಂದರೆ ನಾನು ಹುಟ್ಟಿ ಬೆಳೆದಿದ್ದೇ ಅಲ್ಲಿ. ಈ ಪ್ರಸ್ತಾವನೆಯಿಂದ ಜಿಲ್ಲೆಯ ಹೆಸರಾಗಲಿ, ಆಡಳಿತವಾಗಲಿ ಅಥವಾ ವಿಸ್ತೀರ್ಣವಾಗಲಿ ಬದಲಾಗುವುದಿಲ್ಲ."
ನೋಯ್ಡಾ ಮಾದರಿ ಅಭಿವೃದ್ಧಿ:
"ದೆಹಲಿಯ ಪಕ್ಕದಲ್ಲಿ ನೋಯ್ಡಾ ಅಭಿವೃದ್ಧಿ ಹೊಂದಿದ ಮಾದರಿಯಲ್ಲೇ, ಬೆಂಗಳೂರಿನ ಮೇಲಿರುವ ಒತ್ತಡವನ್ನು ವಿಕೇಂದ್ರೀಕರಣ ಮಾಡುವುದು ನಮ್ಮ ಉದ್ದೇಶ. ಬಂಡವಾಳ ಹೂಡಿಕೆ ಹೆಚ್ಚಾಗಿ ಜಿಲ್ಲೆಯ ಒಳಿತಿಗಾಗಿ ಈ ಬೇಡಿಕೆ ಇಡಲಾಗಿದೆ."
ಏಷ್ಯಾದ ದೊಡ್ಡ ಇಂಡಸ್ಟ್ರಿಯಲ್ ಹಬ್: "ತುಮಕೂರಿನಲ್ಲಿ 20,000 ಎಕರೆಯಲ್ಲಿ ಬೃಹತ್ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು, ಈಗಾಗಲೇ ಎರಡು ಹಂತಗಳು ಮುಗಿದಿವೆ. ಜಪಾನ್ ಮೂಲದ ದೊಡ್ಡ ಕಂಪನಿಯೂ ಬಂದಿದೆ. ಜಿಲ್ಲೆಯಲ್ಲಿ 9 ಇಂಜಿನಿಯರಿಂಗ್ ಹಾಗೂ 3 ಮೆಡಿಕಲ್ ಕಾಲೇಜುಗಳಿದ್ದು, ಇಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲು ನಗರವನ್ನು ಬೆಳೆಸಲೇಬೇಕಿದೆ" ಎಂದರು.
ಸಿಎಂ ಬದಲಾವಣೆ ಚರ್ಚೆ: "ಹೈಕಮಾಂಡ್ ತೀರ್ಮಾನಿಸುತ್ತದೆ"
ಸಚಿವ ಕೆ.ಎನ್. ರಾಜಣ್ಣ ಅವರ 'ಸಿಎಂ ಬದಲಾವಣೆ' ಹೇಳಿಕೆ ಹಾಗೂ ತಮಗೆ ಸಿಎಂ ಆಗುವ ಅವಕಾಶ ಸಿಗಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ರಾಜಣ್ಣ ನಮ್ಮ ಜಿಲ್ಲೆಯವರು, ನನ್ನ ಆಪ್ತ ಸ್ನೇಹಿತರು. ಜೊತೆಯಲ್ಲೇ ಓದಿದ ನಂಟಿರುವುದರಿಂದ ಸ್ವಾಭಾವಿಕವಾಗಿ ಅವರಿಗೆ ನನ್ನ ಮೇಲೆ ಅಭಿಮಾನವಿದೆ. 'ತುಮಕೂರಿಗೆ ಒಂದು ಅವಕಾಶ ಕೊಡಿ' ಎಂದು ಅವರು ಕೇಳಿದ್ದರಲ್ಲಿ ನನಗೇನು ತಪ್ಪು ಕಾಣಿಸುತ್ತಿಲ್ಲ. ಆದರೆ, ಮುಖ್ಯಮಂತ್ರಿಯನ್ನು ಬದಲಾಯಿಸುವ ಅಥವಾ ಮುಂದುವರಿಸುವ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ನಿನ್ನೆ ಉಪಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ."
ಡಾ. ಜಿ. ಪರಮೇಶ್ವರ್, ಗೃಹ ಸಚಿವ.
ಖಾಕಿ ಪಡೆಯಲ್ಲಿ ಅಕ್ರಮ: ಕಳ್ಳರಾದ ಪೊಲೀಸರ ವಿರುದ್ಧ ಕಠಿಣ ಕ್ರಮ:
ಎಚ್ಎಸ್ಆರ್ ಲೇಔಟ್ ಪೊಲೀಸರೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಇಲಾಖೆಯಲ್ಲಿ ಇಂತಹ ಕಪ್ಪು ಚುಕ್ಕೆಗಳನ್ನು ಸಹಿಸುವುದಿಲ್ಲ ಎಂದರು.
"ಮೇಲ್ನೋಟಕ್ಕೆ ತಪ್ಪು ಸಾಬೀತಾದ ತಕ್ಷಣವೇ ಆರೋಪಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಇಲಾಖಾ ತನಿಖೆಯ ನಂತರ ಕಠಿಣ ಶಿಕ್ಷೆ ವಿಧಿಸಲಾಗುವುದು. ಪೊಲೀಸರು ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಸಿವಿಲ್ ವ್ಯವಹಾರಗಳಲ್ಲಿ ತೊಡಗಬಾರದು ಎಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೂ ಅಗತ್ಯ ನಿರ್ದೇಶನ ನೀಡಲಾಗಿದೆ" ಎಂದು ತಿಳಿಸಿದರು.
ಬಿಡದಿ ಟೌನ್ಶಿಪ್ ರಾಜಕೀಯ ಮುಕ್ತ: ವಿಕೇಂದ್ರೀಕರಣಕ್ಕೆ ಕ್ಯಾಬಿನೆಟ್ ಅಸ್ತು ಬಿಡದಿ ಟೌನ್ಶಿಪ್ ನಿರ್ಮಾಣದ ಸುತ್ತ ನಡೆಯುತ್ತಿರುವ ರಾಜಕೀಯ ಹಗ್ಗಜಗ್ಗಾಟದ ಕುರಿತು ಮಾತನಾಡಿದ ಪರಮೇಶ್ವರ್,
"ಇದು ಇವತ್ತಿನ ಯೋಜನೆಯಲ್ಲ. ನೈಸ್ ರಸ್ತೆ ನಿರ್ಮಿಸುವ ಸಮಯದಲ್ಲೇ ಮೈಸೂರು ಮಾರ್ಗದಲ್ಲಿ ಮೂರ್ನಾಲ್ಕು ಟೌನ್ಶಿಪ್ ಮಾಡುವ ಪ್ರಸ್ತಾವನೆ ಇತ್ತು. ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಡಿಸಿಎಂ ಅವರು ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಇಟ್ಟಿದ್ದರು, ಕ್ಯಾಬಿನೆಟ್ ಇದಕ್ಕೆ ಒಪ್ಪಿಗೆ ನೀಡಿದೆ. ರೈತರನ್ನು ಮನವೊಲಿಸಿ, ಸೂಕ್ತ ಪರಿಹಾರ ನೀಡಿಯೇ ಭೂಮಿ ವಶಪಡಿಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ" ಎಂದು ಸ್ಪಷ್ಟಪಡಿಸಿದರು.



