ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿಯಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಭಾರಿ ದುರಂತಗಳನ್ನು ಸೃಷ್ಟಿಸಿದೆ. ನಗರದ ವಿವಿಧೆಡೆ ಸಂಭವಿಸಿದ ಅವಘಡಗಳಲ್ಲಿ ಒಟ್ಟು ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟರೆ, ಮೈಸೂರು ರಸ್ತೆಯಲ್ಲಿ ಗೋದಾಮಿನ ಶೀಟ್ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಬೌರಿಂಗ್ ಆಸ್ಪತ್ರೆ ಬಳಿ ದಾರುಣ ಅಂತ್ಯ:
ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಪಕ್ಕದ ಹಳೆಯ ಕಾಂಪೌಂಡ್ ಗೋಡೆ ಮಳೆಗೆ ಕುಸಿದು ಬಿದ್ದಿದೆ. ಈ ವೇಳೆ ಫುಟ್ಪಾತ್ನಲ್ಲಿ ವ್ಯಾಪಾರ ಮಾಡುತ್ತಿದ್ದವರು ಹಾಗೂ ಪಾದಚಾರಿಗಳು ಅವಶೇಷಗಳಡಿ ಸಿಲುಕಿದ್ದಾರೆ. ದುರ್ಘಟನೆಯಲ್ಲಿ 6 ವರ್ಷದ ಬಾಲಕಿ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಮೃತರ ವಿವರ: ಮೊಹಮ್ಮದ್ ಅಬ್ದುಲ್ (52), ಫಯಾಜ್ ಅಹ್ಮದ್ (39), ಮುಸಾವೀರ್ ಬೇಗಂ (6) - ಕರ್ನಾಟಕ. ಲತಾ (57), ಸ್ಮಿತಾ (47) - ಕೇರಳ. ಮೊಹಮದ್ ಸಲಾವುದ್ದಿನ್ ಅನ್ಸಾರಿ (36) - ಉತ್ತರ ಪ್ರದೇಶ. ನಸಿಮುಲ್ಲಾ (19) - ಅಸ್ಸೋಂ. ಘಟನೆಯಲ್ಲಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲಗಿದ್ದಾಗಲೇ ಬಂದೆರಗಿದ ಸಾವು:
ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಗೋದಾಮಿನ ಶೀಟ್ಗಳು ಹಾರಿ ಪಕ್ಕದ ಮನೆಯ ಮೇಲೆ ಬಿದ್ದ ಪರಿಣಾಮ, ಮನೆಯೊಳಗೆ ಮಲಗಿದ್ದ ಮಂಜು (35) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿರುಗಾಳಿಯ ತೀವ್ರತೆಗೆ ಸಿಮೆಂಟ್ ಶೀಟ್ಗಳು ಚೂರುಚೂರಾಗಿ ಅವರ ಮೇಲೆ ಬಿದ್ದಿವೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಮೇಲೆ ಬಿದ್ದ ಮರ: ಇಬ್ಬರಿಗೆ ಗಾಯ
ಬಸವನಗುಡಿಯ ರಾಮಕೃಷ್ಣ ಮಠದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ರಾಕೇಶ್ (26) ಮತ್ತು ಮಂಜುನಾಥ್ (30) ಗಾಯಗೊಂಡಿದ್ದಾರೆ. ರಾಕೇಶ್ ಅವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಎಂ ಭೇಟಿ ಮತ್ತು ಪರಿಹಾರ ಘೋಷಣೆ:
ದುರಂತದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಸೂಚಿಸಿದರು.
ಅಧಿಕಾರಿಗಳಿಗೆ ತರಾಟೆ: "ನಗರದಲ್ಲಿ ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಹಳೆಯ ಕಾಂಪೌಂಡ್ ಮತ್ತು ಕಟ್ಟಡಗಳನ್ನು ತಕ್ಷಣವೇ ಗುರುತಿಸಿ ತೆರವುಗೊಳಿಸಬೇಕು," ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕಡಕ್ ಎಚ್ಚರಿಕೆ ನೀಡಿದ್ದಾರೆ.


