ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭೂ ಮಂಜೂರಾತಿಗಾಗಿ ಕಳೆದ ಹತ್ತು ದಿನಗಳಿಂದಲೂ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಬಗರ್ ಹುಕುಂ ಸಾಗುವಳಿದಾರರು ಬುಧವಾರ ಸಂಜೆ ದಿಢೀರನೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಥಳಕ್ಕೆ ಬಂದು ಮನವಿಯನ್ನು ಆಲಿಸುತ್ತಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕುಮಾರ್ ಸಮತಳ ಮುತ್ತಿಗೆಯ ನೇತೃತ್ವ ವಹಿಸಿ ಮಾತನಾಡುತ್ತ ಭೂಮಿ ಹಕ್ಕು ಪತ್ರಕ್ಕಾಗಿ ಹತ್ತು ದಿನಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಯಾವ ಶಾಸಕರು ನಮ್ಮ ಬಳಿ ಬಂದು ಅಹವಾಲುಗಳನ್ನು ಕೇಳುತ್ತಿಲ್ಲ. ವಿಧಾನಸಭೆ ಚುನಾವಣೆ ಪೂರ್ವ ಹಾಗೂ ನಂತರದಲ್ಲಿ ಭೂಮಿ ಹಕ್ಕು ಪತ್ರ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಲಕ್ಷಾಂತರ ಬಗರ್ಹುಕುಂ ಸಾಗುವಳಿದಾರರಿದ್ದಾರೆ. ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇನ್ನು ಹಕ್ಕುಪತ್ರ ನೀಡಿಲ್ಲವೆನ್ನುವುದಾದರೆ ಆಳುವ ಸರ್ಕಾರಗಳು ಯಾರ ಪರವಾಗಿದೆ ಎನ್ನುವುದೇ ನಿಗೂಢವಾಗಿದೆ. ಇನ್ನಾದರೂ ಹಕ್ಕು ಪತ್ರಗಳನ್ನು ಕೊಡದಿದ್ದರೆ ಹೋರಾಟವನ್ನು ಉಗ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆಂದು ಎಚ್ಚರಿಸಿದರು.
ಕಾಯ್ದೆ ಕಾನೂನು ನೆಪದಲ್ಲಿ ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಅರ್ಜಿಗಳನ್ನು ತಿರಸ್ಕರಿಸುವುದನ್ನು ಕೂಡಲೆ ನಿಲ್ಲಿಸಬೇಕು. ಹೊಟ್ಟೆ ಪಾಡಿಗಾಗಿ ತುಂಡು ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಒನ್ ಟೈಂ ಸೆಟ್ಲಮೆಂಟ್ ಮೂಲಕ ಬಗೆಹರಿಸಿ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಕುಮಾರ್ ಸಮತಳ ಒತ್ತಾಯಿಸಿದರು.
ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ವೆಂಕಟೇಶ್ ಬಚ್ಚಬೋರನಹಟ್ಟಿ, ಅಂಜಿನಪ್ಪ, ಹೀರಜ್ಜ, ಕರಿಯಪ್ಪ, ಕೃಷ್ಣಮೂರ್ತಿ, ಚೇತನ್, ಹೊರಕೇರಪ್ಪ,
ತಿಪ್ಪೇಸ್ವಾಮಿ, ಭಾರತಮ್ಮ, ಕುಮಾರ್, ಮಹೇಶ, ಪಾರ್ವತಮ್ಮ, ತಿಪ್ಪಮ್ಮ, ಕರಿಯಮ್ಮ, ಸುನಂದಮ್ಮ, ಚಂದ್ರಣ್ಣ, ಪುರುಷೋತ್ತಮ, ಮಾದಪ್ಪ, ವೆಂಕಟೇಶ್ ಇನ್ನು ಮುಂತಾದವರು ಮುತ್ತಿಗೆಯಲ್ಲಿ ಭಾಗವಹಿಸಿದ್ದರು.


