ಚಂದ್ರವಳ್ಳಿ ನ್ಯೂಸ್, ತುಮಕೂರು:
"ಪರಿಶ್ರಮ ಇದ್ದ ಕಡೆಗೆ ಇತಿಹಾಸ ಸೃಷ್ಟಿಯಾಗುತ್ತದೆ, ನಂಬಿಕೆ ಇದ್ದ ಕಡೆಗೆ ಅದ್ಭುತಗಳು ನಡೆಯುತ್ತವೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಅವರು ಪ್ರತಿಪಾದಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ, ಕಲ್ಪತರು ನಾಡು ತುಮಕೂರಿನಲ್ಲಿ ಹಮ್ಮಿಕೊಂಡಿದ್ದ "ಕರ್ನಾಟಕ ಸರ್ಕಾರದ 3 ವರ್ಷಗಳ ಸಾರ್ಥಕ ಪಯಣ" ಹಾಗೂ "3ನೇ ವರ್ಷದ ಸಾಧನೆಯ ಸೇವೆಯ ಸಮರ್ಪಣೆ" ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಶಾಸಕರ ಸಮ್ಮುಖದಲ್ಲಿ ಈ ಸಮಾವೇಶ ನಡೆಯಿತು.
ದೇಶದ ಇತಿಹಾಸದಲ್ಲೇ ಮೊದಲ ಬಾರಿ: ದಾಖಲೆಯ ಹಕ್ಕುಪತ್ರ ವಿತರಣೆಕಾರ್ಯಕ್ರಮದ ಪ್ರಮುಖ ಸಾಧನೆಯಾಗಿ ತುಮಕೂರು ಜಿಲ್ಲೆಯ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಒಂದೇ ಜಿಲ್ಲೆಯಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಕ್ಕು ಪತ್ರಗಳನ್ನು ನೀಡುತ್ತಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎಂದು ಹೆಮ್ಮೆಯಿಂದ ನುಡಿದ ಡಿಸಿಎಂ, ಈ ಮೂಲಕ ನಮ್ಮ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. "ಸತ್ಯ ಇದ್ದ ಕಡೆ ಗೆಲುವು ಇದ್ದೇ ಇರುತ್ತದೆ" ಎಂದು ಅವರು ಈ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು.
ಕಲ್ಪತರು ನಾಡಿನ ಜನತೆಗೆ ಕೃತಜ್ಞತೆ-
ತುಮಕೂರು ಜಿಲ್ಲೆಯ ಧಾರ್ಮಿಕ ಮತ್ತು ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, ತುಮಕೂರು ಜಿಲ್ಲೆಯು ದಕ್ಷಿಣದ ಕಾಶಿಯಂತೆ ಪ್ರಸಿದ್ಧಿ ಪಡೆದಿದೆ. ಇದು ಧಾರ್ಮಿಕ, ಆಧ್ಯಾತ್ಮಿಕತೆಯ ಜೊತೆಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿರುವ ಪವಿತ್ರ ಭೂಮಿಯಾಗಿದೆ.
ರಾಜ್ಯದಲ್ಲಿ ಬದಲಾವಣೆ ತರಲಿದ್ದಾರೆ ಎಂಬ ನಂಬಿಕೆಯಿಂದ ಜನತೆ ಕಾಂಗ್ರೆಸ್ಗೆ 136 ಸ್ಥಾನಗಳನ್ನು ಹಾಗೂ ತುಮಕೂರಿನಲ್ಲಿ 7 ಶಾಸಕರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದಾರೆ. ಈ ಮೂಲಕ ಜನರ ಋಣ ತೀರಿಸಲು ನಮಗೆ ಅವಕಾಶ ಸಿಕ್ಕಂತಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ವಿಪಕ್ಷಗಳ ಟೀಕೆಗೆ ತಿರುಗೇಟು: ದೇಶಕ್ಕೇ ಮಾದರಿ ಪಂಚ ಗ್ಯಾರಂಟಿಗಳು-ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆ ತಂದಿರುವ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಇಂದು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಡಿಸಿಎಂ ತಿಳಿಸಿದರು. ಗ್ಯಾರಂಟಿಗಳನ್ನು ಟೀಕಿಸುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಟೀಕೆ ಮಾಡುವವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಯಾವುದೇ ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ದಾನ ಧರ್ಮ ಮಾಡುವ 'ಕೈ' ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹಾಗಾಗಿಯೇ ನುಡಿದಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನರ ಬದುಕಿನಲ್ಲಿ ನಾವು ಸಕಾರಾತ್ಮಕ ಬದಲಾವಣೆ ತರುತ್ತಿದ್ದೇವೆ" ಎಂದು ಹೆಮ್ಮೆಯಿಂದ ಹೇಳಿದರು.


