ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಬಿಡದಿ ಟೌನ್ಶಿಪ್) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ರೈತ ಪ್ರತಿನಿಧಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.
ಕುಮಾರಪಾರ್ಕ್ನಲ್ಲಿರುವ ತಮ್ಮ ಸರ್ಕಾರಿ ಗೃಹ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ಯೋಜನೆಯ ಸಾಧಕ-ಬಾಧಕಗಳು ಹಾಗೂ ರೈತರ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ರೈತರ ಹಿತರಕ್ಷಣೆಗೆ ಬದ್ಧವಾಗಿ ಮಹತ್ವದ ಉಪನಗರ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಸಭೆ ಆಯೋಜನೆಯಾಗಿತ್ತು.
ಈ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಹಲವು ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜನಪ್ರತಿನಿಧಿಗಳು: ಶಾಸಕರಾದ ಹೆಚ್. ಸಿ. ಬಾಲಕೃಷ್ಣ ಮತ್ತು ಪ್ರಮುಖ ಮುಖಂಡರಾದ ಗಾಣಕಲ್ ನಟರಾಜ್, ರೈತ ಮುಖಂಡರಾದ ರಾಜಣ್ಣ ಹೊಸೂರು, ಸಿದ್ದರಾಜು, ಮಂಜುನಾಥ, ಶಿವರಾಮು ಜಯರಾಮಯ್ಯ, ಕೃಷ್ಣಮೂರ್ತಿ, ಹಾಗೂ ವಿಶ್ವನಾಥ್ ಸೇರಿದಂತೆ ಬಿಡದಿ ಭಾಗದ ಪ್ರಮುಖ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಸಂಚಾರ ಒತ್ತಡವನ್ನು ಕಡಿಮೆ ಮಾಡಲು ಬಿಡದಿ ಉಪನಗರ (ಟೌನ್ಶಿಪ್) ಯೋಜನೆಯು ಅತ್ಯಂತ ಪ್ರಮುಖವಾಗಿದ್ದು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಮುನ್ನಡೆಸಲು ಸರ್ಕಾರ ಮುಂದಾಗಿದೆ.


