ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಮಲೆನಾಡು ಭಾಗದ ರೈತರು ಹಾಗೂ ಸಾರ್ವಜನಿಕರ ನಿದ್ದೆಗೆಡಿಸಿದ್ದ ಕಾಡುಕೋಣಗಳ ಉಪಟಳಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾದ ಅತ್ಯಂತ ವಿಶಿಷ್ಟ ‘ಕಾಡುಕೋಣ ಸೆರೆ ಕಾರ್ಯಾಚರಣೆ’ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮೂಡಿಗೆರೆ ಅರಣ್ಯ ಉಪವಿಭಾಗದ ಆಲ್ಲೂರು ವಲಯದ ಹಕ್ಕಿಮಕ್ಕಿ ಸಮೀಪ ಭಾರಿ ಗಾತ್ರದ ಕಾಡುಕೋಣವೊಂದನ್ನು ಅರಣ್ಯ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಮಧ್ಯಪ್ರದೇಶದ ಮಾದರಿ ಆಧರಿಸಿದ ಕಾರ್ಯಾಚರಣೆ:
ಮಲೆನಾಡಿನಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ ಹಿನ್ನೆಲೆಯಲ್ಲಿ ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಸ್ಥಳಾಂತರಿಸಲು ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ ಅವರ ನೇತೃತ್ವದ ಅಧಿಕಾರಿಗಳ ತಂಡವು ಮಧ್ಯಪ್ರದೇಶದ ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಸೆರೆ ತಂತ್ರಜ್ಞಾನದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಪುರಸ್ಕರಿಸಿದ ರಾಜ್ಯ ಸರ್ಕಾರವು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಉಪಟಳ ನೀಡುತ್ತಿದ್ದ ಮೂರು ಕಾಡುಕೋಣಗಳನ್ನು ಸೆರೆಹಿಡಿಯಲು ವಿಶೇಷ ಅನುಮೋದನೆ ನೀಡಿತ್ತು.
ಮಳೆಯ ನಡುವೆ ಸಾಹಸಮಯ ಕಾರ್ಯಾಚರಣೆ:
ಅರಿವಳಿಕೆ ಚುಚ್ಚುಮದ್ದು: ಕೊಪ್ಪ ಅರಣ್ಯ ವಿಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ತೀವ್ರಗೊಂಡಿತ್ತು. ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ಅರೇನೂರು-ಹಕ್ಕಿಮಕ್ಕಿ ಸಮೀಪದ ಜಮೀನುಗಳಿಗೆ ನುಗ್ಗುತ್ತಿದ್ದ ಭಾರಿ ಗಾತ್ರದ ಕಾಡುಕೋಣಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು.
ನೂರಕ್ಕೂ ಹೆಚ್ಚು ಸಿಬ್ಬಂದಿ ಭಾಗಿ: ಖ್ಯಾತ ವನ್ಯಜೀವಿ ವೈದ್ಯ ಡಾ. ರಮೇಶ್ ನೇತೃತ್ವದ ತಂಡ ಹಾಗೂ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಸುರಿಯುತ್ತಿದ್ದ ಮಳೆಯ ನಡುವೆಯೇ ಅತ್ಯಂತ ಜಾಗರೂಕತೆಯಿಂದ ಈ ಕಾರ್ಯಾಚರಣೆ ನಡೆಸಿದರು.
ಶಿವಮೊಗ್ಗ ಮೃಗಾಲಯಕ್ಕೆ ರವಾನೆ: ಯಶಸ್ವಿಯಾಗಿ ಸೆರೆ ಹಿಡಿಯಲಾದ ಈ ಕಾಡುಕೋಣವನ್ನು ಸುರಕ್ಷಿತವಾಗಿ ವಿಶೇಷ ವಾಹನಕ್ಕೆ ಹತ್ತಿಸಲಾಗಿದ್ದು, ಸದ್ಯ ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಮೊದಲ ದಿನದ ಹಿನ್ನಡೆ ಹಾಗೂ ಯಶಸ್ಸು: ಇದಕ್ಕೂ ಮುನ್ನ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಒಂದು ಕಾಡುಕೋಣಕ್ಕೆ ಅರಿವಳಿಕೆ ನೀಡಲಾಗಿತ್ತಾದರೂ, ಅದು ತೀವ್ರ ಇಳಿಜಾರು ಪ್ರದೇಶದಲ್ಲಿದ್ದ ಕಾರಣ ರಸ್ತೆಗೆ ತರಲು ಸಾಧ್ಯವಾಗಿರಲಿಲ್ಲ. ಪ್ರಾಣಿಯ ಜೀವದ ಹಿತದೃಷ್ಟಿಯಿಂದ ಅದಕ್ಕೆ ಪ್ರಜ್ಞೆ ಬರುವ ಚುಚ್ಚುಮದ್ದು ನೀಡಿ ಮತ್ತೆ ಕಾಡಿಗೆ ಬಿಡಲಾಗಿತ್ತು. ಈ ನಡೆಗೆ ಪರಿಸರಾಸಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಛಲ ಬಿಡದ ಅರಣ್ಯ ಇಲಾಖೆ ಶನಿವಾರ ತನ್ನ ದ್ವಿತೀಯ ಪ್ರಯತ್ನದಲ್ಲಿ ಭರ್ಜರಿ ಯಶಸ್ಸು ಕಂಡಿದೆ.
"ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸೆರೆಹಿಡಿದ ಕಾಡುಕೋಣವನ್ನು ಶಿವಮೊಗ್ಗ ಮೃಗಾಲಯಕ್ಕೆ ರವಾನಿಸಲಾಗಿದೆ. ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ."
ಯಶ್ಪಾಲ್ ಕ್ಷೀರಸಾಗರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು.
"ದಕ್ಷಿಣ ಭಾರತದಲ್ಲೇ ಇಂತಹದೊಂದು ಕಾರ್ಯಾಚರಣೆ ನಡೆಸಿರುವುದು ಇದೇ ಮೊದಲು. ಮಲೆನಾಡಿನಲ್ಲಿ ಕಾಡುಕೋಣಗಳಿಂದ ನಿರಂತರ ಬೆಳೆ ಹಾನಿ ಹಾಗೂ ಮಾನವ ಜೀವಕ್ಕೆ ಹಾನಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಸಚಿವರಿಗೆ ವಿಶೇಷ ಮನವಿ ಮಾಡಲಾಗಿತ್ತು. ಪ್ರಾಣಿಗೆ ಯಾವುದೇ ಜೀವಹಾನಿ ಆಗದಂತೆ ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಈ ಹಿರಿಯ ಪ್ರಯತ್ನ ಮಾಡಲಾಗಿದೆ."
ಟಿ.ಡಿ. ರಾಜೇಗೌಡ, ಶಾಸಕರು, ಶೃಂಗೇರಿ ಕ್ಷೇತ್ರ.


