ಚಂದ್ರವಳ್ಳಿ ನ್ಯೂಸ್, ಮೈಸೂರು:
ಜೆಡಿಎಸ್ ಪಕ್ಷದಿಂದ ಮೈಲುಗಾಲ ದೂರ ಸರಿದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ (ಜಿಟಿಡಿ) ಅವರ ತವರು ಅಂಗಳದಲ್ಲೇ ದಳಪತಿಗಳು ಭರ್ಜರಿ ರಾಜಕೀಯ ತಂತ್ರಗಾರಿಕೆ ನಡೆಸಿದ್ದಾರೆ. ಜಿಟಿಡಿ ಕ್ಷೇತ್ರದಲ್ಲಿ ಬೃಹತ್ ‘ಜನತಾದಳ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದ್ದು, ತಂದೆಯನ್ನು ಸೈಡ್ಲೈನ್ ಮಾಡಿ ಮಗನಿಗೆ ಮಣೆ ಹಾಕಿರುವುದು ಮೈಸೂರು ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬ್ಯಾನರ್ನಿಂದ ಜಿಟಿಡಿ ಫೋಟೋ ಔಟ್, ಮಗನಿಗೆ ಹೈಕಮಾಂಡ್ ಜೈ!:
ಈ ಸಮಾವೇಶದ ಪ್ರಮುಖ ಹೈಲೈಟ್ ಎಂದರೆ, ಕಾರ್ಯಕ್ರಮದ ಯಾವುದೇ ಬ್ಯಾನರ್, ಪೋಸ್ಟರ್ ಅಥವಾ ಕಟೌಟ್ಗಳಲ್ಲಿ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ ಅವರ ಫೋಟೋಗೆ ಜಾಗ ನೀಡಿಲ್ಲ. ಬದಲಾಗಿ, ಅವರ ಪುತ್ರ ಜಿ.ಟಿ. ಹರೀಶ್ ಗೌಡ ಅವರ ಮುಂದಾಳತ್ವದಲ್ಲೇ ಇಡೀ ಕಾರ್ಯಕ್ರಮ ರೂಪಿತಗೊಂಡಿದೆ. ಪಕ್ಷದ ಹಿರಿಯ ನಾಯಕನನ್ನು ಕಡೆಗಣಿಸಿ, ಅವರ ವಾರಸುದಾರನ ನೇತೃತ್ವದಲ್ಲಿ ಸಮಾವೇಶ ನಡೆಸಿರುವುದು ದಳಪತಿಗಳ ಹೊಸ ಪ್ಲಾನ್ ಅನ್ನು ಬಹಿರಂಗಪಡಿಸಿದೆ.
ಕುತೂಹಲ ಮೂಡಿಸಿದ ವರಿಷ್ಠರ ನಡೆ:
ಇತ್ತೀಚೆಗಷ್ಟೇ ಜಿ.ಟಿ. ದೇವೇಗೌಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಭೇಟಿಯ ಬೆನ್ನಲ್ಲೇ ಜಿಟಿಡಿ ಜೆಡಿಎಸ್ನಲ್ಲಿ ಮತ್ತೆ ಸಕ್ರಿಯರಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ, ಇದೀಗ ಅವರದ್ದೇ ಕ್ಷೇತ್ರದಲ್ಲಿ ಅಪ್ಪನನ್ನು ದೂರವಿಟ್ಟು, ಮಗನ ಹೆಗಲಿಗೆ ಜವಾಬ್ದಾರಿ ನೀಡಿ ಬೃಹತ್ ಸಮಾವೇಶ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ರಾಜಕೀಯ ಲೆಕ್ಕಾಚಾರ:
ಜಿ.ಟಿ. ದೇವೇಗೌಡರು ಪಕ್ಷದಿಂದ ದೂರವಿದ್ದರೂ, ಅವರ ಕುಟುಂಬದ ಹಿಡಿತವನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಜೆಡಿಎಸ್ ಹೈಕಮಾಂಡ್ ಮುಂದಾಗಿದೆ. ತಂದೆಯ ಬದಲು ಮಗ ಹರೀಶ್ ಗೌಡ ಅವರನ್ನು ಮುಂಚೂಣಿಗೆ ತರುವ ಮೂಲಕ ಕ್ಷೇತ್ರದಲ್ಲಿ ಹೊಸ ನಾಯಕತ್ವ ಸೃಷ್ಟಿಸಲು ದಳಪತಿಗಳು ಸ್ಕೆಚ್ ಹಾಕಿದಂತಿದೆ.


