ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಸರ್ಕಾರಿ ನೌಕರರೊಂದಿಗೆ ಇದೇ ಆಗಸ್ಟ್ 11ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಆನ್ಲೈನ್ ಮೂಲಕ ನೇರ ಸಂವಾದ ನಡೆಸಲಿದ್ದಾರೆ.
ಈ ಸಂವಾದಕ್ಕಾಗಿ ಜಿಲ್ಲೆಯ ವಿವಿಧೆಡೆ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಹಾಜರಾಗಬೇಕು. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಹೋಬಳಿ ಮಟ್ಟದ ಸರ್ಕಾರಿ ನೌಕರರು ಬಸವೇಶ್ವರ ಕಲ್ಯಾಣ ಮಂಟಪ, ಹಿರೇಗುಂಟನೂರು ಹೋಬಳಿಯವರು ಬೊಮ್ಮೇನಹಳ್ಳಿಯ ಶ್ರೀ ಯೋಗಿ ನಾರಾಯಣ ಕಲ್ಯಾಣ ಮಂಟಪ ಹಾಗೂ ತುರುವನೂರು ಹೋಬಳಿಯವರು ತುರುವನೂರಿನ ಡಿಗ್ರಿ ಕಾಲೇಜಿನ ಹೊಸ ಕಟ್ಟಡದಲ್ಲಿ ಹಾಜರಾಗಬೇಕು.
ಹಿರಿಯೂರಿನಲ್ಲಿ ನಗರಸಭೆ ಸಭಾಂಗಣ (ತಾಲ್ಲೂಕು ಕೇಂದ್ರ), ಧರ್ಮಪುರ ಹಾಗೂ ಐಮಂಗಲದ ಗ್ರಾಮ ಪಂಚಾಯತಿ ಆವರಣ ಮತ್ತು ಜೆ.ಜಿ. ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೊಸದುರ್ಗದಲ್ಲಿ ಹಳೇ ನ್ಯಾಯಾಲಯ (ತಾಲ್ಲೂಕು ಕೇಂದ್ರ), ಮಾಡದಕೆರೆಯ ಶ್ರೀ ಹಾಲುರಾಮೇಶ್ವರ ಸಭಾ ಭವನ, ಶ್ರೀರಾಂಪುರದ ಡಾ.ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಮತ್ತೋಡಿನ ಶ್ರೀ ಬನಶಂಕರಿ ಕಲ್ಯಾಣಿ ಮಂಟಪ ನಿಗದಿಪಡಿಸಲಾಗಿದೆ.
ಹೊಳಲ್ಕೆರೆಯಲ್ಲಿ ಶಿವಮೊಗ್ಗ ರಸ್ತೆಯ ವಾಲ್ಮೀಕಿ ಸಮುದಾಯ ಭವನ (ತಾಲ್ಲೂಕು ಕೇಂದ್ರ), ಚಿಕ್ಕಜಾಜೂರು ಸಮುದಾಯ ಭವನ, ರಾಮಗಿರಿ ಹೋಬಳಿಯವರು ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಮುದಾಯ ಭವನ ಹಾಗೂ ತಾಳ್ಯ ಹೋಬಳಿಯವರು ಹೊರಕೆರೆದೇವರಪುರ ಯಾತ್ರಿ ನಿವಾಸದಲ್ಲಿ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೊಳಕಾಲ್ಮೂರಿನಲ್ಲಿ ತಾಲ್ಲೂಕು ಕಚೇರಿಯ ಕೆ-ಸ್ವಾನ್ ಕೊಠಡಿ (ತಾಲ್ಲೂಕು ಕೇಂದ್ರ) ಹಾಗೂ ರಾಂಪುರದ ಎನ್.ಪಿ.ಎಸ್.ಆರ್. ಪ್ರೌಢಶಾಲೆಯನ್ನು ಗುರುತಿಸಲಾಗಿದೆ. ಚಳ್ಳಕೆರೆಯಲ್ಲಿ ಸರ್ಕಾರಿ ನೌಕರರ ಭವನ (ತಾಲ್ಲೂಕು ಕೇಂದ್ರ), ನಾಯಕನಹಟ್ಟಿ ಒಳಮಠದ ಸಮುದಾಯ ಭವನ, ಪರಶುರಾಂಪುರದ ಶ್ರೀ ವಾಸವಿ ಕನ್ವೆನ್ಷನ್ ಹಾಲ್ ಹಾಗೂ ತಳಕುವಿನ ಜಾಮಿಯಾ ಸಮುದಾಯ ಭವನ ನಿಗದಿಗೊಳಿಸಲಾಗಿದೆ.
ನಿಗಧಿಪಡಿಸಿರುವ ಸಮಯಕ್ಕೆ ಸರಿಯಾಗಿ ಜಿಲ್ಲಾ ಕೇಂದ್ರ, ತಾಲ್ಲೂಕುಕೇಂದ್ರ, ಹೋಬಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಲಾಗಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.



