ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ಸಂಚಾರ ದಟ್ಟಣೆಗೆ ಪ್ರಮುಖ ಪರ್ಯಾಯ ಮಾರ್ಗ ಎಂದೇ ಬಿಂಬಿತವಾಗಿರುವ 'ಬೆಂಗಳೂರು ಸಬ್ಅರ್ಬನ್ರೈಲು ಯೋಜನೆ'ಯ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಈ ಕುರಿತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆಯ ಮಹತ್ವದ ಪ್ರಗತಿಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬದ್ಧತೆಯಿಂದಾಗಿ ಯೋಜನೆ ಚುರುಕುಗೊಂಡಿದ್ದು, ಬೆಂಗಳೂರಿನ ಸಂಚಾರ ವ್ಯವಸ್ಥೆಯ ಚಿತ್ರಣವೇ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿವರು ಹಂಚಿಕೊಂಡಿರುವ ನಾಲ್ಕೂ ಕಾರಿಡಾರ್ಗಳ ಸದ್ಯದ ತಾಜಾ ಮಾಹಿತಿ ಈ ಕೆಳಗಿನಂತಿದೆ.
ನಾಲ್ಕು ಕಾರಿಡಾರ್ಗಳ ಇತ್ತೀಚಿನ ಪ್ರಗತಿ:
ಕಾರಿಡಾರ್-1 (ದೇವನಹಳ್ಳಿ ಏರ್ಪೋರ್ಟ್ ಮಾರ್ಗ): ಈ ಪ್ರಮುಖ ಮಾರ್ಗಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು, ಪ್ರಾಥಮಿಕ ಸಮೀಕ್ಷಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಕಾರಿಡಾರ್-2 ಮತ್ತು 4: ಈ ಮಾರ್ಗಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಮುಗಿದಿದೆ. ಸದ್ಯ ರೈಲ್ವೆ ನಿಲ್ದಾಣಗಳು ಮತ್ತು ವಯಡಕ್ಟ್ (ಮೇಲ್ಸೇತುವೆ) ನಿರ್ಮಾಣ ಕಾರ್ಯಗಳು ವೇಗವಾಗಿ ಪ್ರಗತಿಯಲ್ಲಿವೆ.
ಕಾರಿಡಾರ್-3: ಈ ಮಾರ್ಗದ ವಿನ್ಯಾಸಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮುಂದಿನ ಹಂತದ ಕಾಮಗಾರಿಗಳಿಗೆ ಸಿದ್ಧತೆ ನಡೀತಾ ಇದೆ.
ಮಲ್ಟಿ-ಮಾಡಲ್ ಕನೆಕ್ಟಿವಿಟಿ (ಸಂಯೋಜಿತ ಸಾರಿಗೆ):
ಈ ಸಬ್ಅರ್ಬನ್ರೈಲು ಕೇವಲ ಸ್ವತಂತ್ರ ರೈಲು ಮಾರ್ಗವಾಗಿ ಉಳಿಯದೆ, ನಗರದ ಒಟ್ಟಾರೆ ಸಾರಿಗೆ ವ್ಯವಸ್ಥೆಯನ್ನು ಬೆಸೆಯಲಿದೆ.
ನಮ್ಮ ಮೆಟ್ರೋ- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನಗರದ ಪ್ರಮುಖ ಭಾರತೀಯ ರೈಲ್ವೆ ನಿಲ್ದಾಣಗಳು, ಬೆಂಗಳೂರಿನ ಪ್ರಮುಖ ಐಟಿ ಹಬ್ಗಳನ್ನು ಪರಸ್ಪರ ಸಂಪರ್ಕಿಸಲಿದೆ.
ಸಚಿವರ ಮಾತು: "ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ನಮ್ಮ ಸರ್ಕಾರದ ಬದ್ಧತೆಯಿಂದ ಬೆಂಗಳೂರು ಸಬ್ಅರ್ಬನ್ರೈಲು ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಪ್ರಮುಖ ಐಟಿ ಹಬ್ಗಳು ಹಾಗೂ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಈ ಯೋಜನೆ ಬೆಂಗಳೂರಿನ ಸಂಚಾರ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸಲಿದೆ" ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಯೋಜನೆಯು ಪೂರ್ಣಗೊಂಡರೆ ಬೆಂಗಳೂರಿನ ರಸ್ತೆಗಳ ಮೇಲಿನ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದ್ದು, ಐಟಿ ಉದ್ಯೋಗಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ವರದಾನವಾಗಲಿದೆ.


