ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮತದಾರರ ಪಟ್ಟಿಯಲ್ಲಿ ತಮ್ಮ ಗುರುತಿನ ಚೀಟಿ (ಎಪಿಕ್) ಸಂಖ್ಯೆಯನ್ನು ಯಥಾವತ್ತಾಗಿರಿಸಿ, ಹೆಸರನ್ನು ಮಾತ್ರ ಅಪರಿಚಿತ ವ್ಯಕ್ತಿಯ ಹೆಸರಿಗೆ ಬದಲಾಯಿಸಿರುವ ಹಾಗೂ ತಮ್ಮನ್ನು 'ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ' (ಎಎಸ್ಡಿಡಿಒ) ಎಂದು ವರ್ಗೀಕರಿಸಿರುವುದನ್ನು ಪ್ರಶ್ನಿಸಿ ಯುವತಿಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿ ನಿವಾಸಿ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರಾದ ಎಸ್. ಮೈಥಿಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ವಿಚಾರಣೆ ನಡೆಸಿದ ಪೀಠವು ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಬೊಮ್ಮನಹಳ್ಳಿ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಸ್ಥಳೀಯ ಮತಗಟ್ಟೆ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲು ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಮತ್ತು ಅರ್ಜಿಯ ವಿವರ:ಅರ್ಜಿದಾರರಾದ ಎಸ್. ಮೈಥಿಲಿ ಅವರು 2015ರಿಂದ ಎಪಿಕ್ ಕಾರ್ಡ್ ಹೊಂದಿದ್ದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 92ರ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 1099ರಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದರು. ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲೂ ತಮ್ಮ ಹಕ್ಕು ಚಲಾಯಿಸಿದ್ದರು.
ಆದರೆ, ಚುನಾವಣಾ ಆಯೋಗವು 2025ರಲ್ಲಿ ಪ್ರಕಟಿಸಿದ ನವೀಕೃತ ಮತದಾರರ ಪಟ್ಟಿಯಲ್ಲಿ ಮೈಥಿಲಿ ಅವರ ಎಪಿಕ್ ಸಂಖ್ಯೆ, ತಂದೆಯ ಹೆಸರು (ಎಸ್.ಎನ್. ಶ್ರೀನಿವಾಸಮೂರ್ತಿ), ಲಿಂಗ (ಹೆಣ್ಣು) ಮತ್ತು ವಯಸ್ಸು ಎಲ್ಲವೂ ಅರ್ಜಿದಾರರದ್ದೇ ಆಗಿದ್ದರೂ, ಅವರ ಹೆಸರಿನ ಜಾಗದಲ್ಲಿ 'ಸೈಯದ್ ಏಜಾಜ್ ಅಹ್ಮದ್' ಎಂಬ ಅಪರಿಚಿತ ವ್ಯಕ್ತಿಯ ಹೆಸರು ನಮೂದಾಗಿತ್ತು.
ಈ ಗಂಭೀರ ಲೋಪ ಗಮನಕ್ಕೆ ಬಂದ ತಕ್ಷಣವೇ ಮೈಥಿಲಿ ಅವರು ಹೆಸರು ತಿದ್ದುಪಡಿಗಾಗಿ ನಿಗದಿತ 'ನಮೂನೆ-8' ಭರ್ತಿ ಮಾಡಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ, ನವೀಕರಣ ಪ್ರಕ್ರಿಯೆಯ ವೇಳೆ ಅರ್ಜಿದಾರರ ಹೆಸರನ್ನು ಎಎಸ್ಡಿಡಿಒ ಪಟ್ಟಿಯಲ್ಲಿ "ಶಾಶ್ವತ ಸ್ಥಳಾಂತರ" ಎಂದು ವರ್ಗೀಕರಿಸಲಾಗಿತ್ತು. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.




