ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮರಣಶಾಸನ ಬರೆಯುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಬೇಜವಾಬ್ದಾರಿತನವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದವೀಧರರ ವಿಭಾಗದ ಅಧ್ಯಕ್ಷರಾದ ಪ್ರಕಾಶ್ ರಾಮಾನಾಯ್ಕ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣದಿಂದ ರದ್ದುಗೊಳಿಸಿರುವುದು ದೇಶದ ಶಿಕ್ಷಣ ವ್ಯವಸ್ಥೆಗೆ ಅಂಟಿದ ಕಪ್ಪುಚುಕ್ಕೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಸುಮಾರು 22.8 ಲಕ್ಷ ವಿದ್ಯಾರ್ಥಿಗಳು ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಬರೆದ ಪರೀಕ್ಷೆಯು ಈಗ ಹಗರಣಗಳ ಸುಳಿಯಲ್ಲಿ ಸಿಲುಕಿ ರದ್ದಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಆತಂಕ ಹಾಗೂ ಅನಿಶ್ಚಿತತೆಗೆ ಒಳಗಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಇದೊಂದು ವ್ಯವಸ್ಥಿತ ಹಗರಣವಾಗಿದ್ದು ರಾಜಸ್ಥಾನದ SOG ಮತ್ತು CBI ತನಿಖೆಯಲ್ಲಿ ಸುಮಾರು 120 ಪ್ರಶ್ನೆಗಳು ಮೊದಲೇ ಸೋರಿಕೆಯಾಗಿರುವುದು ಪತ್ತೆಯಾಗಿದೆ. ಇದು ಕೇವಲ ಒಂದು ಆಕಸ್ಮಿಕವಲ್ಲ, ಇದು ದೇಶಾದ್ಯಂತ ಹರಡಿರುವ ದೊಡ್ಡ ಶಿಕ್ಷಣ ಮಾಫಿಯಾದ ಕೆಲಸವಾಗಿದೆ. ಪದೇ ಪದೇ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ವಿಫಲವಾಗುತ್ತಿರುವ 'ರಾಷ್ಟ್ರೀಯ ಪರೀಕ್ಷಾ ಸಂಸ್ಥೆ'ಯನ್ನು (NTA) ಕೂಡಲೇ ರದ್ದುಗೊಳಿಸಬೇಕು. ಸರ್ಕಾರದ ವೈಫಲ್ಯಕ್ಕೆ ವಿದ್ಯಾರ್ಥಿಗಳು ಬೆಲೆ ತೆರುವಂತಾಗಿರುವುದು ಅತ್ಯಂತ ದುರದೃಷ್ಟಕರ.
ಪ್ರತಿ ಬಾರಿ ಇಂತಹ ಹಗರಣಗಳು ನಡೆದಾಗ ತನಿಖೆಯ ಭರವಸೆ ನೀಡಿ ಕೈತೊಳೆದುಕೊಳ್ಳುವ ಕೇಂದ್ರ ಸರ್ಕಾರ, ಈ ಬಾರಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿರುವ ಮಾನಸಿಕ ಮತ್ತು ಆರ್ಥಿಕ ನಷ್ಟಕ್ಕೆ ಉತ್ತರಿಸಬೇಕೆು ಸರ್ಕಾರ ಇದರ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದೆಡೆ ಡಿಜಿಟಲ್ ಇಂಡಿಯಾ ಎಂದು ಬೊಬ್ಬೆ ಹೊಡೆಯುವ ಪ್ರಧಾನಿ ಮೋದಿಯವರು, ದೇಶದ ಅತ್ಯಂತ ದೊಡ್ಡ ಪ್ರವೇಶ ಪರೀಕ್ಷೆಯ ಗೌಪ್ಯತೆಯನ್ನು ಕಾಪಾಡಲು ಯಾಕೆ ವಿಫಲವಾಗುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣಗೊಳಿಸಿರುವ ಬಿಜೆಪಿ ಸರ್ಕಾರಕ್ಕೆ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಮತ್ತು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ.


