ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನದ ಎಫೆಕ್ಟ್, ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.
ಈ ಬೆಳವಣಿಗೆಯನ್ನು ಹೈಕಮಾಂಡ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಈಗಾಗಲೇ ಸಂಪೂರ್ಣ ಮಾಹಿತಿ ಪಡೆದಿದೆ.
ಆದರೆ, ಇತ್ತ ರಾಜ್ಯ ಬಿಜೆಪಿಯ ಒಳಗಡೆ ಮತ್ತೊಂದು ಹಂತದ ರಾಜಕೀಯ ಜಟಾಪಟಿ ಆರಂಭವಾಗಿದ್ದು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೆಂದೇ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಈ ಅಡ್ಡಮತದಾನ ಮಾಡಿಸಲಾಗಿದೆ ಎಂಬ ಗಂಭೀರ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಯಡಿಯೂರಪ್ಪ ವಿರೋಧಿ ಬಣದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಹಣ ಪಡೆದು ಅಡ್ಡಮತದಾನ: ರೇಣುಕಾಚಾರ್ಯ ಗಂಭೀರ ಆರೋಪ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸ್ವಪಕ್ಷದ ನಾಯಕರ ವಿರುದ್ಧವೇ ತೀವ್ರ ಆಕ್ರೋಶ ಹೊರಹಾಕಿದರು:
"ನಮ್ಮ ಪಕ್ಷದಲ್ಲಿರುವ ಕೆಲವು 'ಮೀರ್ ಸಾದಿಕ್'ಗಳು ಹಣ ಪಡೆದು ಅಡ್ಡಮತದಾನ ಮಾಡಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವುದನ್ನು ಅರಗಿಸಿಕೊಳ್ಳಲು ಹಿರಿಯ ನಾಯಕರ ಕೆಲವು ಬಣಗಳಿಗೆ ಸಾಧ್ಯವಾಗುತ್ತಿಲ್ಲ."
"ಹೇಗಾದರೂ ಮಾಡಿ ವಿಜಯೇಂದ್ರ ಅವರ ಮುಖಕ್ಕೆ ಮಸಿ ಬಳಿಯಬೇಕು ಹಾಗೂ ಅವರ ನೇತೃತ್ವಕ್ಕೆ ಹಿನ್ನಡೆ ಉಂಟುಮಾಡಬೇಕು ಎಂಬ ಒಂದೇ ಕಾರಣಕ್ಕೆ ಈ ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ" ಎಂದು ಕಿಡಿಕಾರಿದರು.
ರಾಜ್ಯಾಧ್ಯಕ್ಷ ಸ್ಥಾನದ ಮೇಲಿದೆಯೇ ಕಣ್ಣು?:
ಪರಿಷತ್ ಚುನಾವಣೆಯಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರೂ, ಪಕ್ಷದ ಶಾಸಕರಿಂದಲೇ ಮತಗಳು ಕೈತಪ್ಪಿರುವುದು ನಾಯಕತ್ವದ ವೈಫಲ್ಯ ಎಂದು ಬಿಂಬಿಸಲು ಒಂದು ಬಣ ಹವಣಿಸುತ್ತಿದೆ. ಇದನ್ನು ಮುನ್ಸೂಚಿಸಿರುವ ರೇಣುಕಾಚಾರ್ಯ, ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಉದ್ದೇಶದಿಂದಲೇ ಒಳಗೊಳಗೆ ಈ ರಾಜಕೀಯ ತಂತ್ರ ಹೆಣೆಯಲಾಗಿದೆ ಎಂದು ಪರೋಕ್ಷವಾಗಿ ಸ್ವಪಕ್ಷದ ಅತೃಪ್ತರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ರೇಣುಕಾಚಾರ್ಯ ಅವರ ಈ ಹೇಳಿಕೆ ಹೊರಬಿದ್ದಿರುವುದು, ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಮತ್ತಷ್ಟು ತಾರಕಕ್ಕೇರುವ ಮುನ್ಸೂಚನೆ ನೀಡಿದೆ.



